ADVERTISEMENT

ತುರ್ತು ವಿಚಾರಣೆಗೆ ‘ಸುಪ್ರೀಂ’ ನಕಾರ

ಮಾಜಿ ಸಚಿವ ಜನಾರ್ದನ ರೆಡ್ಡಿ ಜಾಮೀನು ಅರ್ಜಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2014, 19:30 IST
Last Updated 16 ಡಿಸೆಂಬರ್ 2014, 19:30 IST

ನವದೆಹಲಿ: ಅಕ್ರಮ ಗಣಿಗಾರಿಕೆ ಆರೋಪದಡಿ ಜೈಲಿನಲ್ಲಿರುವ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರ ಜಾಮೀನು ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿತು.

ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌ ದತ್ತು, ನ್ಯಾಯಮೂರ್ತಿಗಳಾದ  ಮದನ್‌ ಬಿ. ಲೋಕೂರ ಮತ್ತು ಎ.ಕೆ. ಸಿಕ್ರಿ ಅವರಿದ್ದ ಪ್ರಧಾನ ಪೀಠದ ಕಲಾಪ ಪಟ್ಟಿಯಲ್ಲಿ  ರೆಡ್ಡಿ ಪ್ರಕರಣ ನಮೂದಾಗಿ­ದ್ದರೂ ಸಮಯ ಮೀರಿದ್ದರಿಂದ ವಿಚಾರಣೆಗೆ ಬರಲಿಲ್ಲ.

ರೆಡ್ಡಿ ಅವರ ವಕೀಲ ದುಶ್ಯಂತ್ ದವೆ ನ್ಯಾಯಪೀಠ ಮುಂದೆ ಈ ಕುರಿತು ಪ್ತಸ್ತಾಪಿಸಿದರು. ಆದರೆ, ತುರ್ತಾಗಿ ಅರ್ಜಿ ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿ ನಿರಾಕರಿಸಿ, ‘ಸರದಿಯ ಮೇಲೆ ವಿಚಾರಣೆಗೆ ಬರಲಿ’ ಎಂದು ಸೂಚಿಸಿದರು. ಇದರಿಂದಾಗಿ ರೆಡ್ಡಿ ಪ್ರಕರಣ ಜನವರಿ 5ರ ಬಳಿಕವೇ ನ್ಯಾಯಾಲಯದ ಮುಂದೆ ಬರುವ ಸಾಧ್ಯತೆಯಿದೆ.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಜನಾರ್ದನ ರೆಡ್ಡಿ ಕರ್ನಾಟಕ ಮತ್ತು ಆಂಧ್ರದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಆರೋಪದಡಿ ಬಂಧನದಲ್ಲಿದ್ದಾರೆ. ಅವರ ವಿರುದ್ಧ ಎಂಟು ಪ್ರಕರಣಗಳು ದಾಖಲಾಗಿದ್ದು, ಆರು ಪ್ರಕರಣಗಳಲ್ಲಿ ಜಾಮೀನು ಸಿಕ್ಕಿದೆ.
‘ಒಬಳಾಪುರಂ ಮೈನಿಂಗ್‌ ಕಂಪೆನಿ’ (ಒಎಂಸಿ) ಅಕ್ರಮಗಳು ಹಾಗೂ ಜಾಮೀನು ಪಡೆಯಲು ನ್ಯಾಯಾಧೀಶರಿಗೆ ಲಂಚ ಕೊಡಲು ಪ್ರಯತ್ನಿಸಿದ ಪ್ರಕರಣಗಳಲ್ಲಿ ಜಾಮೀನು ಅರ್ಜಿ ಕುರಿತ ತೀರ್ಮಾನ ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.