ನವದೆಹಲಿ (ಪಿಟಿಐ): ಜೀವ ವಿಮೆ, ಭವಿಷ್ಯ ನಿಧಿ, ಮ್ಯೂಚುವಲ್ ಫಂಡ್, ರಾಷ್ಟ್ರೀಯ ಸಾಲಪತ್ರ ಸೇರಿದಂತೆ ವಿವಿಧ ರೀತಿಯ ಹಣಕಾಸು ಯೋಜನೆಗಳಲ್ಲಿ ಸಾರ್ವಜನಿಕರು ಮಾಡಿರುವ ಹೂಡಿಕೆಗೆ ನೀಡಿರುವ ತೆರಿಗೆ ವಿನಾಯ್ತಿ ಮಿತಿಯನ್ನು ಹಣಕಾಸು ಸಚಿವಾಲಯ ಪ್ರಸಕ್ತ ಬಜೆಟ್ನಲ್ಲಿ 2 ಲಕ್ಷಕ್ಕೆ ಹೆಚ್ಚಿಸುವ ನಿರೀಕ್ಷೆ ಇದೆ.
ಜನಸಾಮಾನ್ಯರ ಉಳಿತಾಯನ್ನು ಹಣದುಬ್ಬರದಿಂದ ರಕ್ಷಿಸಲು ಸಚಿವಾಲಯ ಈ ಕ್ರಮ ಕೈಗೊಳ್ಳಲಿದೆ. ತೆರಿಗೆ ವಿನಾಯ್ತಿ ಬಯಸುವ ವೇತನ ವರ್ಗದವರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ.
ಇದುವರೆಗೆ ಆದಾಯ ತೆರಿಗೆಯ 80 ಸಿ, 80 ಸಿಸಿ ಮತ್ತು 80ಸಿಸಿಸಿಯಡಿ, ವಿವಿಧ ರೀತಿಯ ಹಣಕಾಸು ಹೂಡಿಕೆ ಯೋಜನೆಗಳಿಗೆ 1 ಲಕ್ಷದವರೆಗೆ ತೆರಿಗೆ ವಿನಾಯ್ತಿ ನೀಡಲಾಗಿತ್ತು. ಇದೀಗ ಇದನ್ನು ದ್ವಿಗುಣಗೊಳಿಸಲು ಸಚಿವಾಲಯ ಚಿಂತಿಸುತ್ತಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಜುಲೈ 10ರಂದು ಮಂಡಿಸಲಿರುವ 2014–15ನೇ ಸಾಲಿನ ಬಜೆಟ್ನಲ್ಲಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.
ಕುಟುಂಬ ಸದಸ್ಯರ ಹೂಡಿಕೆ ಉತ್ತೇಜಿಸಲು ತೆರಿಗೆ ವಿನಾಯ್ತಿ ಮಿತಿಯನ್ನು ಹೆಚ್ಚಿಸಬೇಕು ಎಂದು ಬ್ಯಾಂಕುಗಳು ಮತ್ತು ವಿಮಾ ಸಂಸ್ಥೆಗಳು ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದ್ದವು.
ಹಣದುಬ್ಬರ ಹೆಚ್ಚಳ ಮತ್ತು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2008ರಲ್ಲಿ ‘ಜಿಡಿಪಿ’ಯ ಶೇ 38ರಷ್ಟಿದ್ದ ಭಾರತೀಯ ಕುಟುಂಬ ಸದಸ್ಯರ ಉಳಿತಾಯ ಪ್ರಮಾಣ 2012–13ರಲ್ಲಿ ‘ಜಿಡಿಪಿ’ಯ ಶೇ 30ಕ್ಕೆ ಕುಸಿತ ಕಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.