ADVERTISEMENT

ದಲಿತರ ದೌರ್ಜನ್ಯ ತಡೆ ಕಾಯ್ದೆ ಬಲವರ್ಧನೆ

ತಿದ್ದುಪಡಿ ಮಸೂದೆ ಮಂಡನೆಗೆ ಮುಂದಾದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 25 ಜೂನ್ 2014, 19:30 IST
Last Updated 25 ಜೂನ್ 2014, 19:30 IST

ನವದೆಹಲಿ (ಪಿಟಿಐ): ದಲಿತರು ಮತ್ತು ಬುಡಕಟ್ಟು ಜನರ ಮೇಲಿನ ದೌರ್ಜನ್ಯ ತಡೆ ಕಾನೂನಿನ ಬಲವರ್ಧನೆಗೆ ಮುಂದಾ­ಗಿರುವ ಕೇಂದ್ರ ಸರ್ಕಾರ, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆ–1989’ಕ್ಕೆ ತಿದ್ದುಪಡಿ ತರಲು ಮುಂಬರುವ ಬಜೆಟ್‌ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಸಾಧ್ಯತೆ ಇದೆ.

ದಲಿತರು ಮತ್ತು ಬುಡಕಟ್ಟು ಜನರ ಮೇಲೆ ನಡೆಯುವ ಅತ್ಯಾಚಾರ, ಹಲ್ಲೆ, ಅಪಹರಣಗಳಂತಹ ಕ್ರಿಮಿನಲ್‌ ಅಪ­ರಾಧಗಳಿಗೆ ಸದ್ಯ ಜಾರಿಯಲ್ಲಿರುವ ಕಾನೂನಿನಲ್ಲಿ 10 ವರ್ಷಗಳಿಗಿಂತ ಕಡಿಮೆ ಅವಧಿಯ ಜೈಲು ಶಿಕ್ಷೆ ಇದೆ. ಆದ್ದರಿಂದ ಇಂತಹ ಅಪರಾಧಗಳಿಗೆ 10 ವರ್ಷಗಳಿಗೂ ಹೆಚ್ಚು ಕಾಲ ಜೈಲು ಶಿಕ್ಷೆ ವಿಧಿಸಲು ಅವಕಾಶ ಇರುವಂತಹ ತಿದ್ದುಪಡಿಯನ್ನು ತರಲು ಸರ್ಕಾರ ಚಿಂತಿಸಿದೆ ಎಂದು ಮೂಲಗಳು ಹೇಳಿವೆ.

ದಲಿತರು ಮತ್ತು ಬುಡಕಟ್ಟು ಜನರ ಆಸ್ತಿಗಳಿಗೆ ಹಾನಿ, ವಾಮಾಚಾರದ ಆರೋಪ, ದೇಗುಲಗಳಿಗೆ ಪ್ರವೇಶ ನಿರ್ಬಂಧ, ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ, ದ್ವೇಷಕ್ಕೆ ಪ್ರಚೋದನೆಗಳಂತಹ ಅಪರಾಧಗಳನ್ನೂ ಉದ್ದೇಶಿತ ತಿದ್ದುಪಡಿಯ ಮೂಲಕ 1989ರ ಕಾಯ್ದೆಯ ಮೂರನೇ ಪರಿಚ್ಛೇದಕ್ಕೆ ಹೊಸದಾಗಿ ಸೇರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಲೋಚಿಸಿದೆ.

ಇಂತಹ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲ­ಯಗಳ ರಚನೆ, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ವಿಷಯಗಳೂ ಪ್ರಸ್ತಾವಿತ ತಿದ್ದುಪಡಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಹಿಂದಿನ ಯುಪಿಎ ಸರ್ಕಾರ ಈ 1989ರ ಕಾಯ್ದೆಗೆ ತಿದ್ದು­ಪಡಿ ತರುವ ಮಸೂದೆಯನ್ನು ಲೋಕ­ಸಭೆಯಲ್ಲಿ ಮಂಡಿಸಿ­ತ್ತಾದರೂ ಅದಕ್ಕೆ ಅಂಗೀಕಾರ ದೊರಕಲಿಲ್ಲ. ಆದ್ದರಿಂದ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ತಿದ್ದುಪಡಿ ಸುಗ್ರೀವಾಜ್ಞೆ’­-ಯನ್ನು ಕಳೆದ ಮಾರ್ಚ್‌ನಲ್ಲಿ ಜಾರಿಗೆ ತಂದಿತ್ತು.

ಈ ಸುಗ್ರೀವಾಜ್ಞೆಯಲ್ಲಿರುವ ಅಂಶಗಳು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಂಡಿಸಲು ಉದ್ದೇಶಿಸಿರುವ ತಿದ್ದುಪಡಿ ಮಸೂದೆಯಲ್ಲೂ ಇವೆಯೇ  ಎಂಬುದು ಸ್ಪಷ್ಟವಾಗಿಲ್ಲ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.