ನವದೆಹಲಿ (ಪಿಟಿಐ): ದೆಹಲಿ ವಿಶ್ವವಿದ್ಯಾಲಯ ಕಳೆದ ವರ್ಷ ಆರಂಭಿಸಿದ ನಾಲ್ಕು ವರ್ಷದ ಪದವಿ ಶಿಕ್ಷಣ ಕಾರ್ಯಕ್ರಮ ಹೊಸ ವಿವಾದಕ್ಕೆ ಕಾರಣವಾಗಿದೆ.
ಈ ಸಂಬಂಧ ವಿಶ್ವವಿದ್ಯಾಲಯದ ಅನುದಾನ ಆಯೋಗ (ಯುಜಿಸಿ) ಹಾಗೂ ದೆಹಲಿ ವಿವಿ ಸಂಘರ್ಷ ತಾರಕಕ್ಕೇರಿದೆ. ಯುಜಿಸಿ–ದೆಹಲಿ ವಿವಿ ನಡುವಿನ ಸಂಘರ್ಷದಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸ್ಪಷ್ಟಪಡಿಸಿದೆ. ಪರಸ್ಪರ ಚರ್ಚೆಯ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಸಚಿವೆ ಸ್ಮೃತಿ ಇರಾನಿ ಸಲಹೆ ನೀಡಿದ್ದಾರೆ.
ವಿವಾದಕ್ಕೆ ಕಾರಣವಾಗಿರುವ ನಾಲ್ಕು ವರ್ಷಗಳ ಪದವಿ ಶಿಕ್ಷಣ ಕಾರ್ಯಕ್ರಮ ರದ್ದುಪಡಿಸಿ, ಮೂರು ವರ್ಷದ ಪದವಿಗೆ ಮಾತ್ರ ಪ್ರವೇಶ ನೀಡುವಂತೆ ದೆಹಲಿ ವಿಶ್ವವಿದ್ಯಾಲಯ ಹಾಗೂ ಅದರ ವ್ಯಾಪ್ತಿಯ 64 ಕಾಲೇಜುಗಳಿಗೆ ಯುಜಿಸಿ ನಿರ್ದೇಶನ ನೀಡಿತ್ತು.
ಒಂದು ವೇಳೆ ನಿರ್ದೇಶನ ಮೀರಿ ನಾಲ್ಕು ವರ್ಷದ ಪದವಿಗೆ ಪ್ರವೇಶ ನೀಡಿದಲ್ಲಿ ಕಠಿಣ ಪರಿಣಾಮ ಎದುರಿಸಬೇಕಾಗುವುದು ಎಂದು ಯುಜಿಸಿ ಅಧ್ಯಕ್ಷ ವೇದ್ಪ್ರಕಾಶ್ ಎಚ್ಚರಿಕೆ ನೀಡಿದ್ದರು. ಇದಕ್ಕೆ ಸೊಪ್ಪು ಹಾಕದ ದೆಹಲಿ ವಿ.ವಿ. ಕುಲಪತಿ ದಿನೇಶ್ ಸಿಂಗ್, ನಿರ್ಧಾರ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದ ಕಾರಣ ವಿವಾದ ಉಲ್ಬಣಿಸಿದೆ.
ಮತ್ತೊಂದು ಬೆಳವಣಿಗೆಯಲ್ಲಿ ದೆಹಲಿ ವಿವಿಯ ನಿರ್ಧಾರದ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು, ಮಾನವ ಸಂಪನ್ಮೂಲ ಸಚಿವಾಲಯದ ಎದುರು ಪ್ರತಿಭಟನೆ ನಡೆಸಿದವು.
ನಾಳೆಯೇ ಪದವಿ ತರಗತಿಗಳಿಗೆ ಪ್ರವೇಶ ಆರಂಭವಾಗುವ ಕಾರಣ ಸಮಸ್ಯೆಯನ್ನು ಬೇಗ ಇತ್ಯರ್ಥಪಡಿಸುವಂತೆ ಪ್ರತಿಭಟನಾನಿರತರು ಒತ್ತಾಯಿಸಿದರು.
ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ವೇದ್ ಪ್ರಕಾಶ್ ನೇತೃತ್ವದಲ್ಲಿ ಹತ್ತು ಸದಸ್ಯರ ಸಮಿತಿ ರಚಿಸಲಾಗಿದ್ದು, ಆದಷ್ಟು ಬೇಗ ಈ ಕುರಿತು ಸಮಿತಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.