ADVERTISEMENT

ದೇಶದಾದ್ಯಂತ ಸಂಭ್ರಮದ ಗಾಂಧಿ ಜಯಂತಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2014, 7:07 IST
Last Updated 2 ಅಕ್ಟೋಬರ್ 2014, 7:07 IST

ನವದೆಹಲಿ (ಪಿಟಿಐ): ಮಹಾತ್ಮ ಗಾಂಧಿಜಿ ಅವರ 145ನೇ ಜಯಂತಿ ಅಂಗವಾಗಿ ಗುರುವಾರ ದೇಶದೆಲ್ಲಡೆ ರಾಷ್ಟ್ರಪಿತನ ಸ್ಮರಣೆಯನ್ನು ಶ್ರದ್ಧೆ, ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಬೆಳಿಗ್ಗೆಯೇ ರಾಜಘಾಟ್‌ನಲ್ಲಿರುವ ಗಾಂಧಿ ಸ್ಮಾರಕ ಹಾಗೂ ವಿಜಯ್ ಘಾಟ್‌ನಲ್ಲಿರುವ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ಪ್ರಧಾನಿ ಮನಮೋಹನ್‌‌ ಸಿಂಗ್, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್, ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು ಹಾಗೂ ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರು ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿರುವ ಗಣ್ಯರಲ್ಲಿ ಪ್ರಮುಖರು.

ADVERTISEMENT

ರಾಜಘಾಟ್‌ಗೆ ಮೊದಲು ವೆಂಕಯ್ಯ ನಾಯ್ಡು, ಬಳಿಕ ಸೋನಿಯಾ ಗಾಂಧಿ, ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಬಂದರು. ನಂತರ ಮಾಜಿ ಪ್ರಧಾನಿ ಸಿಂಗ್ ಅವರು ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

ತಿಳಿನೀಲಿ ಬಣ್ಣದ ಕುರ್ತಾ ಹಾಗೂ ಬಿಳಿ ಬಣ್ಣದ ನೆಹರೂ ಜಾಕೇಟ್‌ ಧರಿಸಿ ಬಂದ ಪ್ರಧಾನಿ ಮೋದಿ ಅವರನ್ನು ವೆಂಕಯ್ಯ ನಾಯ್ಡು ಅವರು ಸ್ವಾಗತಿಸಿದರು.

ನೇರವಾಗಿ ‘ಗಾಂಧಿ ಸಮಾಧಿ’ಗೆ ತೆರಳಿದ ಮೋದಿ ಅವರು ಪುಷ್ಪ ನಮನ ಸಲ್ಲಿಸಿ ತಲೆ ಬಾಗಿ ವಂದಿಸಿದರು. ಬಳಿಕ ಸಿಂಗ್ ಹಾಗೂ ಮೋದಿ ಅವರು ಪರಸ್ಪರ ಅಭಿನಂದಿಸಿಕೊಂಡರು. ನಂತರ ಮೋದಿ ಅವರು ಕೆಲ ಕಾಲ ಅಲ್ಲಿಯೇ ಕುಳಿತಿದ್ದರು.

ಜಯಂತಿ ಅಂಗವಾಗಿ ಸರ್ವಧರ್ಮ ಪ್ರಾರ್ಥನೆಯನ್ನು ಆಯೋಜಿಸಲಾಗಿತ್ತು.

ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಲು ಸಾಕಷ್ಟು ಸಂಖ್ಯೆಯಲ್ಲಿ ಶಾಲಾ ಮಕ್ಕಳು, ವಿದೇಶಿಯರು ಹಾಗೂ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.