ADVERTISEMENT

ನಕ್ಸಲ್‌ ವಿರುದ್ಧದ ಕಾರ್ಯತಂತ್ರ ಬದಲು

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಸುಳಿವು

ಪಿಟಿಐ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST
ನಕ್ಸಲ್‌ ವಿರುದ್ಧದ ಕಾರ್ಯತಂತ್ರ ಬದಲು
ನಕ್ಸಲ್‌ ವಿರುದ್ಧದ ಕಾರ್ಯತಂತ್ರ ಬದಲು   

ರಾಯಪುರ: ನಕ್ಸಲರ ವಿರುದ್ಧದ ಹೋರಾಟದ ಕಾರ್ಯತಂತ್ರವನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸಲಿದೆ. ಅಗತ್ಯಬಿದ್ದರೆ ಅದನ್ನು ಪರಿಷ್ಕರಿಸಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ರಾಯಪುರಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಡಪಂಥೀಯ ಉಗ್ರವಾದವನ್ನು ಕಿತ್ತೊಗೆಯುವ ಮಾರ್ಗಗಳ ಬಗ್ಗೆ ಚರ್ಚಿಸುವುದಕ್ಕಾಗಿ ಮೇ 8ರಂದು ನಕ್ಸಲ್‌ ಪೀಡಿತ ರಾಜ್ಯಗಳ ಸಭೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಎಡಪಂಥೀಯ ಉಗ್ರವಾದಿಗಳ ಗುಂಪುಗಳು ಅಭಿವೃದ್ಧಿ ವಿರೋಧಿಗಳಾಗಿದ್ದು, ರಾಜ್ಯದ ಅಭಿವೃದ್ಧಿಯನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಬಸ್ತರ್‌ ವಲಯದಲ್ಲಿ ರಸ್ತೆ ಅಭಿವೃದ್ಧಿಯನ್ನು ಕಂಡು ನಕ್ಸಲರು ಹತಾಶರಾಗಿದ್ದಾರೆ. ಅವರ ದುರುದ್ದೇಶ ಈಡೇರದು ಎಂದು ಅವರು ಹೇಳಿದ್ದಾರೆ.

ADVERTISEMENT

ನಮನ: ಛತ್ತೀಸಗಡದ ಶಸಸ್ತ್ರ ಪಡೆಗಳ 4ನೇ ಬೆಟಾಲಿಯನ್ನಿನ ಪ್ರಧಾನ ಕಚೇರಿಗೆ ಭೇಟಿ ನೀಡಿದ ಸಿಂಗ್‌, ಮೃತಪಟ್ಟ ಯೋಧರಿಗೆ ಪುಷ್ಪನಮನ ಸಲ್ಲಿಸಿದರು.

ಚುರುಕು: ಮುಂದಿನ ದಿನಗಳಲ್ಲಿ ನಕ್ಸಲ್‌ ನಿಗ್ರಹ ಕಾರ್ಯಾಚರಣೆಯನ್ನು ಹೆಚ್ಚು ದೃಢತೆ ಮತ್ತು ಚುರುಕಿನಿಂದ ನಡೆಸಲಾಗುವುದು ಎಂದು ರಮಣ್ ಸಿಂಗ್‌ ಹೇಳಿದ್ದಾರೆ.

‘ಬಿಜೆಪಿ–ನಕ್ಸಲರ ನಡುವೆ  ಒಳ ಒಪ್ಪಂದ’
ನವದೆಹಲಿ: ಛತ್ತೀಸಗಡದಲ್ಲಿ ಬಿಜೆಪಿಯು ನಕ್ಸಲರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ದಿಗ್ವಿಜಯ್‌ ಸಿಂಗ್‌ ಆರೋಪಿಸಿದ್ದಾರೆ.

‘ನಕ್ಸಲರ ಸಹಾಯದಿಂದಾಗಿ ಮುಖ್ಯಮಂತ್ರಿ ರಮಣ್ ಸಿಂಗ್‌ ಮತ್ತು ಬಿಜೆಪಿಯವರು ಚುನಾವಣೆ ಗೆದ್ದಿದ್ದಾರೆ. ಇದನ್ನು ನಾನು ಮೊದಲೇ ಹೇಳಿದ್ದೇನೆ. ಈಗ ಮತ್ತೆ ಹೇಳುತ್ತಿದ್ದೇನೆ’ ಎಂದು ಸಿಂಗ್‌ ಹೇಳಿದ್ದಾರೆ.

ನಕ್ಸಲ್‌ ಸಮಸ್ಯೆ ಹತ್ತಿಕ್ಕಲು ಮೋದಿ ಸರ್ಕಾರ ರೂಪಿಸಿರುವ ನೀತಿಗಳನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.

‘ಸೋಮವಾರದ ದಾಳಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗುಪ್ತಚರ ವೈಫಲ್ಯಕ್ಕೆ  ಸ್ಪಷ್ಟ ಉದಾಹರಣೆಯಲ್ಲವೇ? ನಕ್ಸಲರನ್ನು ಎದುರಿಸಲು ಈಗಿನ ಸರ್ಕಾರ  ಯಾವ ಕ್ರಮ ಕೈಗೊಂಡಿದೆ’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲಾ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.