ನವದೆಹಲಿ: ಕಾಳಧನ, ಖೋಟಾನೋಟು, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ಚಟುವಟಿಕೆ ನಿಗ್ರಹಗಳಿಗಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿತ್ತು. ಆದರೆ ನವೆಂಬರ್ 8 ಅಂದರೆ ನೋಟು ರದ್ದು ತೀರ್ಮಾನ ಜಾರಿಗೆ ಬಂದ ದಿನದಂದಿನಿಂದ ಡಿಸೆಂಬರ್ 30ರವರೆಗೆ ನಡೆದ ಐಟಿ ದಾಳಿಗಳಲ್ಲಿ ಖೋಟಾ ನೋಟುಗಳು ಪತ್ತೆಯಾಗಿಲ್ಲ ಎಂದು ವಿತ್ತ ಸಚಿವಾಲಯ ಹೇಳಿದೆ.
ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ (ಪಿಎಸಿ) ಸಲ್ಲಿಸಿದ ವರದಿಯಲ್ಲಿ ವಿತ್ತ ಸಚಿವಾಲಯ ಈ ವಿಷಯವನ್ನು ಹೇಳಿದೆ.
ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ನವೆಂಬರ್ 9ರಿಂದ ಜನವರಿ 4ರ ವರೆಗಿನ ಕಾಲಾವಧಿಯಲ್ಲಿ ಆದಾಯ ತೆರಿಗೆ ಇಲಾಖೆ ಒಟ್ಟು ₹474.37 ಕೋಟಿ ಮೊತ್ತದ ಹಳೆಯ ನೋಟು ಮತ್ತು ಹೊಸ ನೋಟುಗಳ ಕಾಳಧನವನ್ನು ವಶಪಡಿಸಿಕೊಂಡಿದೆ.
ಆದರೆ ಕಾಳಧನ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿರುವ ವ್ಯಕ್ತಿಗಳು ಉಗ್ರ ಸಂಘಟನೆ ಅಥವಾ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ವಿತ್ತ ಸಚಿವಾಲಯ ತಮ್ಮ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.
ಏತನ್ಮಧ್ಯೆ, ಕಳೆದ ವರ್ಷಕ್ಕೆ ಹೋಲಿಸಿದರೆ ನೋಟು ರದ್ದತಿ ಜಾರಿಗೆ ಬಂದ ನಂತರ ದಾಖಲೆರಹಿತ ಆದಾಯ ಇದೆ ಎಂದು ಒಪ್ಪಿಕೊಂಡವರ ಸಂಖ್ಯೆಯಲ್ಲಿ ಶೇ.51 ಏರಿಕೆಯಾಗಿದೆ ಎಂದು ವಿತ್ತ ಸಚಿವಾಲಯ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.