ADVERTISEMENT

ನಾಗಾಲ್ಯಾಂಡ್‌ ರಾಜ್ಯಪಾಲ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2014, 19:30 IST
Last Updated 25 ಜೂನ್ 2014, 19:30 IST

ನವದೆಹಲಿ (ಪಿಟಿಐ): ನಾಗಾಲ್ಯಾಂಡ್‌ ರಾಜ್ಯಪಾಲ ಅಶ್ವನಿ ಕುಮಾರ್‌ ಅವರು ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಹಿಂದಿನ ಯುಪಿಎ ಸರ್ಕಾರ ನೇಮಿಸಿದ್ದ ರಾಜ್ಯಪಾಲರುಗಳಲ್ಲಿ ಮೂವರು ಪದತ್ಯಾಗ ಮಾಡಿದಂತೆ ಆಗಿದೆ.

‘ನಾನು ಬುಧವಾರ ಬೆಳಿಗ್ಗೆ ರಾಜೀನಾಮೆ ಸಲ್ಲಿಸಿ ಶಿಮ್ಲಾಗೆ ಬಂದಿದ್ದೇನೆ. ಈಗ ನಿರಾಳ ಎನಿಸಿದೆ’ ಎಂದು ಅಶ್ವನಿ ಕುಮಾರ್‌ ತಿಳಿಸಿದ್ದಾರೆ.
ನಿವೃತ್ತ ಐಪಿಎಸ್‌ ಅಧಿಕಾರಿ ಅಶ್ವನಿ ಕುಮಾರ್‌ ಅವರನ್ನು ಯುಪಿಎ ಸರ್ಕಾರ 2013ರಲ್ಲಿ ನಾಗಾಲ್ಯಾಂಡ್‌ನ ರಾಜ್ಯಪಾಲರನ್ನಾಗಿ ನೇಮಿಸಿತ್ತು.

ಅಶ್ವನಿ ಅವರು ಸಿಬಿಐ ನಿರ್ದೇಶಕರಾಗಿದ್ದಾಗಲೇ ಸೊಹ್ರಾಬುದ್ದೀನ್‌ ಶೇಖ್‌ ನಕಲಿ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್‌ ಷಾ ಅವರನ್ನು ಬಂಧಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗೃಹ ಸಚಿವಾಲಯದ ಕಾರ್ಯದರ್ಶಿ ಅನಿಲ್‌ ಗೋಸ್ವಾಮಿ ಅವರ ಮೂಲಕ ಯುಪಿಎ ಸರ್ಕಾರ ನೇಮಕ ಮಾಡಿದ್ದ ಕೆಲವು ರಾಜ್ಯಪಾಲರಿಗೆ ರಾಜೀನಾಮೆ ನೀಡುವಂತೆ ಹೇಳಿಸಿತ್ತು. ಇದು ವಿವಾದಕ್ಕೆ ಕಾರಣವಾಯಿತು.

ಗೋಸ್ವಾಮಿ ಅವರಿಂದ ಸೂಚನೆ ಬಂದ ನಂತರ ರಾಜ್ಯಪಾಲರಾದ ಬಿ.ಎಲ್‌. ಜೋಷಿ (ಉತ್ತರ ಪ್ರದೇಶ), ಶೇಖರ್‌ ದತ್‌ (ಛತ್ತೀಸಗಡ) ಅವರು ಕಳೆದ ವಾರ ರಾಜೀನಾಮೆ ನೀಡಿದ್ದರು. ಈಗ ರಾಜೀನಾಮೆ ನೀಡಿರುವ ಮೂವರು ರಾಜ್ಯಪಾಲರು ಮಾಜಿ ಐಪಿಎಸ್‌ ಮತ್ತು ಐಎಎಸ್‌ ಅಧಿಕಾರಿಗಳು. ರಾಜಕೀಯ ಹಿನ್ನೆಲೆಯ ಯಾವ ರಾಜ್ಯಪಾಲರೂ ರಾಜೀನಾಮೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.