ನವದೆಹಲಿ: ನೋಟು ರದ್ದತಿ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಉರ್ಜಿತ್ ಪಟೇಲ್ ಅವರಿಗೆ ನೋಟಿಸ್ ನೀಡಿದ್ದು, ಇದೇ 28ರಂದು ತನ್ನ ಮುಂದೆ ಹಾಜರಾಗುವಂತೆ ಸೂಚಿಸಿದೆ.
ನೋಟು ರದ್ದತಿ ನಿರ್ಧಾರ ಪ್ರಕ್ರಿಯೆ ಮತ್ತು ಅದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಕಾಂಗ್ರೆಸ್ ಸಂಸದ ಕೆ.ವಿ. ಥಾಮಸ್ ನೇತೃತ್ವದ ಸಮಿತಿ ವಿವರ ಕೇಳಲಿದೆ. ಸಮಿತಿಯ ಪ್ರಶ್ನೆಗಳಿಗೆ ಉತ್ತರಿಸಲು ಉರ್ಜಿತ್ ಪಟೇಲ್ ಈಗಾಗಲೇ ತಯಾರಿ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಣಕಾಸು ನಿಯಮಾವಳಿಗಳ ಸಂಸದೀಯ ಸಮಿತಿಯೂ ಈ ಸಂಬಂಧ ಉರ್ಜಿತ್ ಅವರಿಗೆ ನೋಟಿಸ್ ನೀಡಿತ್ತು.
ಸಮಿತಿ ಕೇಳಬಹುದಾದ ಪ್ರಶ್ನೆಗಳು
* ನೋಟು ರದ್ದತಿ ವಿಚಾರದಲ್ಲಿ ಆರ್ಬಿಐ ಆಡಳಿತ ಮಂಡಳಿಯು ಸರ್ಕಾರ ಹೇಳಿದಂತೆ ಕೇಳಿದೆ ಎಂಬ ಆರೋಪಗಳಿವೆ. ಈ ಬಗ್ಗೆ ವಿವರಣೆ ನೀಡಿ.
* ನೋಟು ರದ್ದತಿ ಕ್ರಮವನ್ನು ತರಾತುರಿಯಲ್ಲಿ ಜಾರಿಗೆ ತಂದಿದ್ದು ಏಕೆ?
* ಕ್ರಮ ಜಾರಿಗೂ ಮುನ್ನ ಆರ್ಬಿಐ ಮಂಡಳಿ ಸಭೆ ಸೇರಿತ್ತೆ? ಸಭೆ ಸೇರಿದ್ದರೆ, ಸಭೆ ನಡೆದದ್ದು ಯಾವಾಗ?
* ಚಲಾವಣೆಯಿಂದ ಹಿಂದಕ್ಕೆ ಪಡೆದ ಹಣದ ಮೊತ್ತದ ಮಾಹಿತಿ ನೀಡಿ. ರದ್ದಾದ ನೋಟುಗಳೆಷ್ಟು? ಈವರೆಗೆ ಹಳೆಯ ನೋಟುಗಳಲ್ಲಿ ಬ್ಯಾಂಕ್ಗಳಲ್ಲಿ ಜಮೆಯಾದ ಹಣ ಎಷ್ಟು?
* ಇಡೀ ಪ್ರಕ್ರಿಯೆ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ನೀಡಲು ಆರ್ಬಿಐ ನಿರಾಕರಿಸುತ್ತಿರುವುದು ಏಕೆ?
* ಬ್ಯಾಂಕ್ಗಳಿಂದ ಹಣ ಪಡೆಯಲು ಮಿತಿ ಹೇರುವ ಅಧಿಕಾರ ಆರ್ಬಿಐಗೆ ಬಂದಿದ್ದು ಎಲ್ಲಿಂದ? ಈ ಬಗ್ಗೆ ಯಾವುದೇ ಕಾನೂನುಗಳಿಲ್ಲ. ಹೀಗಿದ್ದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡ ಆರೋಪದಲ್ಲಿ ನಿಮ್ಮನ್ನು ವಿಚಾರಣೆಗೆ ಏಕೆ ಒಳಪಡಿಸಬಾರದು? ನಿಮ್ಮನ್ನು ವಜಾ ಮಾಡಬಾರದೇಕೆ?
* ಆರ್ಬಿಐ ಪ್ರತಿದಿನ ಒಂದೊಂದು ನಿಯಮಗಳನ್ನು ಜಾರಿ ಮಾಡಿದ್ದೇಕೆ?
* ಜನರ ಬೆರಳಿಗೆ ಅಳಿಸಲಾಗದ ಶಾಯಿಯಿಂದ ಗುರುತು ಮಾಡುವ ಮತ್ತು ಮದುವೆಗೆ ಹಣ ಪಡೆದುಕೊಳ್ಳಲು ಮಿತಿ ಹೇರುವ ಉಪಾಯಗಳನ್ನು ಕೊಟ್ಟ ಅಧಿಕಾರಿಗಳು ಯಾರು?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.