ನವದೆಹಲಿ: ನ್ಯಾಯಾಂಗದಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಸುಪ್ರೀಂ ಕೋರ್ಟ್ ವಕೀಲರ ಸಂಘ ಆರೋಪಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಹಿರಿಯ ವಕೀಲೆ ಇಂದು ಮಲ್ಹೊತ್ರಾ ಅವರ ನೇಮಕಕ್ಕೆ ಅನುಮೋದನೆ ನೀಡಿ, ಉತ್ತರಾಖಂಡ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರ ನೇಮಕ ತಡೆಹಿಡಿದಿರುವುದಕ್ಕೆ ವಕೀಲರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
ಇಂದು ಮಲ್ಹೊತ್ರಾ ಉತ್ತಮ ವಕೀಲೆ ಮತ್ತು ಸಮರ್ಥ ನ್ಯಾಯಮೂರ್ತಿ ಎಂಬುದನ್ನು ಸಾಬೀತುಪಡಿಸಬಲ್ಲರು. ಆದರೆ ಕೆ.ಎಂ.ಜೋಸೆಫ್ ಅವರ ನೇಮಕಾತಿ ಶಿಫಾರಸಿಗೆ ಸರ್ಕಾರ ಅನುಮೋದನೆ ನೀಡದಿರಲು ಸಾಧ್ಯವೇ ಇಲ್ಲ. ಒಬ್ಬರ ನೇಮಕಕ್ಕೆ ಅನುಮೋದನೆ ನೀಡಿ ಮತ್ತೊಬ್ಬರ ನೇಮಕಕ್ಕೆ ಸಮ್ಮತಿ ಸೂಚಿಸುವ ಮೂಲಕ ನ್ಯಾಯಾಂಗದ ಕೆಲಸದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿದೆ. ಇದು ಗಂಭೀರ ವಿಚಾರ ಎಂಬುದಾಗಿ ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ, ವಕೀಲ ವಿಕಾಸ್ ಸಿಂಗ್ ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಕೊಲಿಜಿಯಂ, ಮಲ್ಹೊತ್ರಾ ಮತ್ತು ಜೋಸೆಫ್ ಅವರ ಹೆಸರನ್ನು ಜನವರಿಯಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅದನ್ನು ಪರಿಶೀಲಿಸಿದ ಕಾನೂನು ಸಚಿವಾಲಯ ಮಲ್ಹೊತ್ರಾ ಅವರ ನೇಮಕಕ್ಕೆ ಮಾತ್ರ ಅನುಮತಿ ನೀಡಿದೆ.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.