ನವದೆಹಲಿ : ಕೆಳಹಂತದ ನ್ಯಾಯಾಲಯಗಳಲ್ಲಿನ ನ್ಯಾಯಾಧೀಶರ ವೇತನ ಪರಿಷ್ಕರಣೆ ಸಂಬಂಧ ಕೇಂದ್ರ ಸರ್ಕಾರ ಆಯೋಗ ರಚಿಸಿದೆ.
ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗ ರಚಿಸಲು ಕೇಂದ್ರ ಸಚಿವ ಸಂಪುಟ ಕಳೆದ ವಾರ ಅನುಮತಿ ನೀಡಿತ್ತು.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ವೆಂಕಟರಾಮ ರೆಡ್ಡಿ ಅವರು ಆಯೋಗದ ಮುಖ್ಯಸ್ಥರಾಗಿದ್ದು, ಕೇರಳ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ಬಸಂತ್ ಅವರು ಸದಸ್ಯರಾಗಿದ್ದಾರೆ. 2019ರಲ್ಲಿ ಆಯೋಗ ತನ್ನ ವರದಿ ನೀಡಲಿದೆ.
2010ರಲ್ಲಿ ಕೆಳಹಂತದ ನ್ಯಾಯಾಲಯಗಳ ನ್ಯಾಯಾಧೀಶರು ಹಾಗೂ ಅಧಿಕಾರಿಗಳ ವೇತನ ಹೆಚ್ಚಳವಾಗಿತ್ತು. ಈ ವೇತನ ಹೆಚ್ಚಳ 2006ರ ಜನವರಿ 1ರಿಂದ ಪೂರ್ವಾನ್ವಯವಾಗಿತ್ತು
ಪ್ರಸ್ತುತ, ಆರಂಭಿಕ ಹಂತದಲ್ಲಿ ಕಿರಿಯ ಸಿವಿಲ್ ನ್ಯಾಯಾಧೀಶರಿಗೆ ₹45 ಸಾವಿರ ಹಾಗೂ ಹಿರಿಯ ನ್ಯಾಯಾಧೀಶರಿಗೆ ₹80 ಸಾವಿರ ವೇತನ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.