ADVERTISEMENT

ಪಕ್ಷದಲ್ಲಿನ ಬೆಳವಣಿಗೆ ನೋವು ತಂದಿದೆ: ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2015, 9:22 IST
Last Updated 3 ಮಾರ್ಚ್ 2015, 9:22 IST

ನವದೆಹಲಿ (ಪಿಟಿಐ/ಐಎಎನ್ಎಸ್): ಆಮ್ ಆದ್ಮಿ ಪಕ್ಷದಲ್ಲಿ (ಎಎಪಿ) ಎದ್ದಿರುವ ಭಿನ್ನಮತ ‘ತುಂಬಾ ನೋವು ಹಾಗೂ ದುಃಖ’ ತಂದಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಪ್ರತಿಕ್ರಿಯಿಸಿದ್ದಾರೆ.

‘ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ನಾನು ತುಂಬಾ ನೊಂದಿದ್ದು, ದುಃಖವಾಗಿದೆ. ಇದು ನಮ್ಮ ಮೇಲೆ ದೆಹಲಿ ಜನತೆ ಇಟ್ಟ ನಂಬಿಕೆಗೆ ಬಗೆದ ದ್ರೋಹವಾಗಿದೆ. ಜನರ ನಂಬಿಕೆ ಕಳೆದುಕೊಳ್ಳಲು ನಾನು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ’ ಎಂದು ಕೇಜ್ರಿವಾಲ್ ಅವರು ಟ್ವೀಟ್ ಮಾಡಿದ್ದಾರೆ.

‘ಆಂತರಿಕ ಕದನದಲ್ಲಿ ಸಿಲುಕಲು ನಾನು ಇಷ್ಟಪಡುವುದಿಲ್ಲ. ದೆಹಲಿ ಆಡಳಿತದ ಮೇಲೆ ಮಾತ್ರವೇ ಗಮನ ಹರಿಸುತ್ತೇನೆ' ಎಂದೂ ಎಎಪಿ ಪಕ್ಷದ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ADVERTISEMENT

ಪಕ್ಷದಲ್ಲಿ ಭುಗಿಲೆದ್ದಿರುವ ಭಿನ್ನಮತ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಚರ್ಚೆಗಾಗಿ ಕೇಜ್ರಿವಾಲ್ ಅವರು ಬುಧವಾರ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಕರೆದಿದ್ದಾರೆ.

ಪಕ್ಷದ ಸಂಸ್ಥಾಪಕ ಸದಸ್ಯರಾದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್, ಪಕ್ಷದಲ್ಲಿನ ‘ಏಕ ವ್ಯಕ್ತಿ ಕೇಂದ್ರೀತ’ ಧೋರಣೆಯನ್ನು ಪ್ರಶ್ನಿಸಿದ್ದರು. ಇದರಿಂದ ಆಂತರಿಕ ಭಿನ್ನಮತ ಬಹಿರಂಗ ವೇದಿಕೆ ಅಲಂಕರಿಸಿದಂತಾಗಿದೆ.

ಮತ್ತೊಂದೆಡೆ, ಬುಧವಾರ ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಯಾದವ್ ಹಾಗೂ ಭೂಷಣ್ ಅವರಿಗೆ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ ಹುದ್ದೆಗಳಿಂದ ಕೆಳಗಿಳಿಯುವಂತೆ ಅಥವಾ ಸಕ್ರಿಯವಲ್ಲ ಜವಾಬ್ದಾರಿ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.