ನವದೆಹಲಿ: ಕಳೆದವಾರ ಭಾರತೀಯ ಸೇನೆಯ ಇಬ್ಬರು ಯೋಧರನ್ನು ಹತ್ಯೆಗೈದಿದ್ದ ಪಾಕಿಸ್ತಾನದ ಅಟ್ಟಹಾಸಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ ಕ್ಷಿಪಣಿ ದಾಳಿ ಮೂಲಕ ಗಡಿನಿಯಂತ್ರಣ ರೇಖೆ ಬಳಿಯಿದ್ದ ಪಾಕಿಸ್ತಾನ ಸೇನೆಯ ಬಂಕರ್ಗಳನ್ನು ಹೊಡೆದುರುಳಿಸಿದೆ.
60 ಸೆಕೆಂಡ್ಗೂ ಕಡಿಮೆ ಸಮಯದಲ್ಲಿ ಪಾಕಿಸ್ತಾನದ ಬಂಕರ್ಗಳು ಸರ್ವನಾಶವಾಗಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ವಲಯದಿಂದ ಸೇನೆ ಕ್ಷಿಪಣಿ ದಾಳಿ ನಡೆಸಿದೆ.
ದಾಳಿಯ ವಿಡಿಯೋ ದೃಶ್ಯಾವಳಿಯಲ್ಲಿ ಭಾರತೀಯ ಯೋಧರೊಬ್ಬರು ಬಂಕರ್ಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯು ಯಶಸ್ವಿಯಾಗಿದೆ ಎನ್ನುತ್ತಿರುವುದು ದಾಖಲಾಗಿದೆ.
ಪಾಕಿಸ್ತಾನದ ಅಮಾನವೀಯ ವರ್ತನೆಗೆ ಪ್ರತ್ಯುತ್ತರ ನೀಡುವ ಸಲುವಾಗಿ ಭಾರತೀಯ ಸೇನೆಯು ಗಡಿ ನಿಯಂತ್ರಣ ರೇಖೆಯ ಬಳಿ ಇರುವ ವಿವಿಧ ವಲಯಗಳಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮೇ 1 ರಂದು ಪಾಕಿಸ್ತಾನ ಸೇನೆ ಕೃಷ್ಣ ಘಾಟಿ ವಲಯದ ಬಳಿ ನಡೆಸಿದ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಇವರ ಶಿರಚ್ಛೇದನ ನಡೆಸಿ ಅಮಾನವೀಯ ವರ್ತನೆ ತೋರಿದ್ದರು.