ನವದೆಹಲಿ: ಪಾಕಿಸ್ತಾನದ ತಾಹೀರ್ ಅಲಿ ಅವರು ಬಲವಂತದಿಂದ ತನ್ನನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಿ, ಅಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದ ನವದೆಹಲಿಯ ಮಹಿಳೆ ಉಜ್ಮಾ ಅಹಮದ್ ಗುರುವಾರ ತವರಿಗೆ ಮರಳಿದ್ದಾರೆ.
ಭಾರತಕ್ಕೆ ಬಂದ ಉಜ್ಮಾ ಪಾಕಿಸ್ತಾನ ಒಂದು ಮರಣ ಕೂಪ. ಅಲ್ಲಿಗೆ ಹೋಗುವುದು ಸುಲಭ ಆದರೆ ಅಲ್ಲಿಂದ ಬರುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ.
ಮನೆಯವರು ನಿಶ್ಚಯಿಸಿದ ಹುಡುಗನೊಂದಿಗೆ ಮದುವೆಯಾಗಿ ಪಾಕಿಸ್ತಾನಕ್ಕೆ ಹೋಗುವ ಹೆಣ್ಣು ಮಕ್ಕಳನ್ನು ನಾನು ನೋಡಿದ್ದೇನೆ. ಪಾಕಿಸ್ತಾನದಲ್ಲಿ ಅವರ ಜೀವನ ದುಸ್ತರವಾಗಿದೆ. ತುಂಬಾ ಸಂಕಷ್ಟಗಳನ್ನು ಎದುರಿಸುತ್ತಾ ಅವರು ಅಲ್ಲಿ ಬದುಕುತ್ತಿದ್ದಾರೆ. ಅಲ್ಲಿ ಕೆಲವು ಮನೆಗಳಲ್ಲಿ ಪುರುಷರು ಎರಡು ಮೂರು ಹೆಂಡತಿಯರನ್ನಿರಿಸಿಕೊಂಡಿದ್ದಾರೆ ಎಂದು ಸುಷ್ಮಾ ಸ್ವರಾಜ್ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಜ್ಮಾ ಕಣ್ಣೀರಿಟ್ಟಿದ್ದಾರೆ.
[related]
ಇನ್ನು ಕೆಲವು ದಿನಗಳನ್ನು ನಾನಲ್ಲಿ ಕಳೆಯುತ್ತಿದ್ದರೆ ಅಲ್ಲೇ ಸಾಯುತ್ತಿದ್ದೆ. ಫಿಲಿಫೇನ್ಸ್, ಮಲೇಷ್ಯಾದಿಂದ ಬಂದ ಹುಡುಗಿಯರನ್ನು ಅಲ್ಲಿ ಬಲೆ ಬೀಸಿ ಕರೆದೊಯ್ಯಲಾಗುತ್ತದೆ. ನನ್ನಂತೆಯೇ ಮೋಸದ ಜಾಲದಲ್ಲಿ ಸಿಲುಕಿದ ಹಲವಾರು ಮಹಿಳೆಯರು ಅಲ್ಲಿದ್ದಾರೆ.
ತನ್ನನ್ನು ರಕ್ಷಿಸಿದ ಭಾರತೀಯ ಹೈಕಮಿಷನ್ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಉಜ್ಮಾ ಧನ್ಯವಾದ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.