ADVERTISEMENT

ಪ್ರಧಾನಿ ಹೇಳಿಕೆಗೆ ವಿರೋಧಿಗಳ ಪಟ್ಟು

ಆಗ್ರಾ ಮತಾಂತರ ವಿವಾದ: ಸಂಸತ್ತಿನ ಉಭಯ ಸದನಗಳಲ್ಲಿ ಗದ್ದಲ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2014, 19:30 IST
Last Updated 15 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ): ಬಾಬ್ರಿ ಮಸೀದಿ ಧ್ವಂಸ ಕುರಿತು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ವಿವಾದಾತ್ಮಕ ಹೇಳಿಕೆ ಹಾಗೂ ಆಗ್ರಾ ಮತಾಂತರ ಪ್ರಕರಣ ಸೋಮವಾರ ಉಭಯ ಸದನ­ಗಳಲ್ಲಿ ಭಾರಿ ಗದ್ದಲಕ್ಕೆ ಕಾರಣವಾದವು.

ಈ ವಿವಾದಾತ್ಮಕ ವಿಷಯಗಳ ಬಗ್ಗೆ  ಚರ್ಚೆಗೆ ಅವಕಾಶ ನೀಡಬೇಕು ಹಾಗೂ ಪ್ರಧಾನಿ ಈ ಬಗ್ಗೆ ಸದನಕ್ಕೆ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷಗಳು  ಪಟ್ಟು ಹಿಡಿದ ಕಾರಣ ಉಭಯ ಸದನಗಳ ಕಲಾಪಗಳನ್ನು ಐದಾರು ಬಾರಿ ಮುಂದೂಡಬೇಕಾಯಿತು.

ಬಿಹಾರದ ವೈಶಾಲಿಯಲ್ಲಿ ಇತ್ತೀಚೆಗೆ ಬಿಜೆಪಿ ಸಂಸದ ಆದಿತ್ಯನಾಥ್, ಬಾಬ್ರಿ ಮಸೀದಿ ಧ್ವಂಸ ಹಿಂದೂಗಳ ಏಕತೆಗೆ ಸಾಕ್ಷಿ ಮತ್ತು ಮುಸ್ಲಿಮರ ಮರು ಮತಾಂ­ತರ ನಿಲ್ಲಬಾರದು ಎಂಬ ವಿವಾ­ದಾತ್ಮಕ ಹೇಳಿಕೆ ನೀಡಿದ್ದರು.  ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾ­ಪಿಸಿದ ಸಿಪಿಎಂನ ಸೀತಾರಾಂ ಯೆಚೂರಿ ಹಾಗೂ ಸಿಪಿಐನ ಡಿ. ರಾಜಾ ಪ್ರಧಾನಿ ಹೇಳಿಕೆಗೆ ಪಟ್ಟು ಹಿಡಿದರು.  

‘ಅಭಿವೃದ್ಧಿ ವಿಷಯವನ್ನು ಮುಂದಿ­ಟ್ಟು­­ಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿ ಇದರಿಂದ ಹಿಂದೆ ಸರಿಯ­ಬಾರದು. ಒಪ್ಪಿಗೆಯ ಮತಾಂತರ ಸರಿ. ಆದರೆ, ಬಲಾಂತರದ ಮತಾಂತರ ಕೂಡಲೇ ನಿಲ್ಲಬೇಕು’ ಎಂದು ಎನ್‌ಡಿಎ ಮಿತ್ರಪಕ್ಷ ವಾದ ಆರ್‌ಪಿಐನ ಮುಖ್ಯಸ್ಥ ರಾಮದಾಸ್‌ ಅಠಾವಳೆ ಒತ್ತಾಯಿಸಿ­ದರು. ಎಡ ಪಕ್ಷಗಳ ಬೆಂಬಲಕ್ಕೆ ನಿಂತ ಕಾಂಗ್ರೆಸ್‌, ಟಿಎಂಸಿ ಹಾಗೂ ಜೆಡಿಯು ಸೇರಿದಂತೆ ಬಹುತೇಕ ವಿರೋಧ ಪಕ್ಷಗಳ ಸದ­ಸ್ಯರು, ಪ್ರಧಾನಿ ಮೋದಿ  ಅವರು ತಮ್ಮ ಸಂಸದರು ಹಾಗೂ ಸಂಪುಟ ಸಹೋ­ದ್ಯೋಗಿಗ­ಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿವಾದಾತ್ಮಕ ಹೇಳಿಕೆ ನೀಡುವ ಬಿಜೆಪಿ ಸಂಸ­ದರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳು­ವುದಾಗಿ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.