ನವದೆಹಲಿ (ಪಿಟಿಐ) : ಗಾಂಧಿ ಕುಟುಂಬ ಹಾಗೂ ಬಿಜೆಪಿ ನಡುವಣ ವಾಗ್ಯುದ್ಧ ಮುಂದುವರಿದಿದೆ. ಬಿಜೆಪಿ ನಾಯಕರನ್ನು ದಿಕ್ಕಾಪಾಲಾಗಿ ಓಡುತ್ತಿರುವ ‘ಇಲಿ’ ಗಳು ಎಂಬ ಪ್ರಿಯಾಂಕಾ ವಾಧ್ರಾ ಹೇಳಿಕೆ ಬಿಜೆಪಿ ನಾಯಕರನ್ನು ಕೆರಳಿಸಿದೆ. ಪ್ರಿಯಾಂಕಾ ರಾಜಕೀಯ ಚರ್ಚೆಯ ಗುಣಮಟ್ಟ ತಗ್ಗಿಸುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅರುಣ್ ಜೇಟ್ಲಿ ಸೋಮವಾರ ಆರೋಪಿಸಿದ್ದಾರೆ.
ಬೇರೆಯವರನ್ನು ಟೀಕಿಸುವಾಗ ಬಳಸುವ ಭಾಷೆ ಬಗ್ಗೆ ಎಚ್ಚರಿಕೆ ಇರಬೇಕು. ತೀಕ್ಷ್ಣವಾಗಿ ಟೀಕೆ ಮಾಡುವಾಗ ಇತರರ ಘನತೆಗೆ ಧಕ್ಕೆ ಬರದಂತೆ ಗೌರವಯುತವಾದ ರೀತಿಯಲ್ಲಿ ಭಾಷೆ ಬಳಸಬೇಕು ಎಂದು ಜೇಟ್ಲಿ ತಮ್ಮ ಬ್ಲಾಗ್ ನಲ್ಲಿ ಬರೆದಿದ್ದಾರೆ.
ವಾಧ್ರಾ ದಂಪತಿ ಯಾರೊಬ್ಬರಿಗೂ ಹೆದರುವ ಅಗತ್ಯ ಇಲ್ಲ. ಅವರು ಕಾನೂನಿಗೆ ಹೆದರಿದರೆ ಸಾಕು. ವಾಧ್ರಾ ಬಹಳ ದೊಡ್ಡವರಿರಬಹುದು. ಆದರೆ ಕಾನೂನು ಅವರಿಗಿಂತಲೂ ದೊಡ್ಡದು ಎಂದು ಅವರು ತಿಳಿಸಿದ್ದಾರೆ.
ಸೋನಿಯಾ ಗಾಂಧಿ, ರಾಹುಲ್ ಕೃಪಾಕಟಾಕ್ಷದಿಂದಲೇ ರಾಬರ್ಟ್ ವಾಧ್ರಾ ದೊಡ್ಡ ಸಾಮಾಜ್ರ್ಯವನ್ನೇ ಕಟ್ಟಿದ್ದಾರೆ ಎಂದು ಬಿಜೆಪಿ ಭಾನುವಾರ ಆರೋಪಿಸಿತ್ತು. ಅದಕ್ಕೆ ಉತ್ತರವಾಗಿ ಪ್ರಿಯಾಂಕಾ ತಮ್ಮ ಪತಿ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರನ್ನು ಭೀತಿಯಿಂದ ದಿಕ್ಕಾಪಾಲಾಗಿ ಓಡಾಡುವ ‘ಇಲಿ’ಗಳಿಗೆ ಹೋಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.