ADVERTISEMENT

ಬಂಧನ ಭೀತಿಯಿಂದ ಪಾರಾದ ಕಾರ್ತಿ

ಪಿಟಿಐ
Published 24 ಮಾರ್ಚ್ 2018, 19:30 IST
Last Updated 24 ಮಾರ್ಚ್ 2018, 19:30 IST
ಬಂಧನ ಭೀತಿಯಿಂದ ಪಾರಾದ ಕಾರ್ತಿ
ಬಂಧನ ಭೀತಿಯಿಂದ ಪಾರಾದ ಕಾರ್ತಿ   

ನವದೆಹಲಿ: ಏರ್‌ಸೆಲ್‌–ಮ್ಯಾಕ್ಸಿಸ್‌ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರನ್ನು ಏಪ್ರಿಲ್‌ 16ರವರೆಗೆ ಬಂಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನಿಗೆ ಕಾರ್ತಿ ಸಲ್ಲಿಸಿರುವ ಅರ್ಜಿಯ ಕುರಿತು ಮೂರು ವಾರಗಳ ಒಳಗೆ ವಿವರವಾಗಿ ಪ್ರತಿಕ್ರಿಯಿಸುವಂತೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳಿಗೆ (ಇ.ಡಿ) ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ಸೂಚಿಸಿದ್ದಾರೆ.

ನ್ಯಾಯಾಲಯದ ಅನುಮತಿ ಇಲ್ಲದೆ ದೇಶದಿಂದ ಹೊರಹೋಗುವಂತಿಲ್ಲ ಎಂದೂ ಅವರು ಹೇಳಿದ್ದಾರೆ.

ADVERTISEMENT

‘ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಕಾರ್ತಿ ವಿರುದ್ಧ ಯಾವುದೇ ಆರೋಪಗಳಿಲ್ಲ. ಜತೆಗೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯ (ಎಫ್‌ಐಪಿಬಿ) ಅಧಿಕಾರಿಗಳೊಂದಿಗೆ ಅವರಿಗೆ ಸಂಪರ್ಕವಿದ್ದ ಕುರಿತು ಯಾವುದೇ ದಾಖಲೆಗಳಿಲ್ಲ’ ಎಂದು ಅವರ ಪರ ವಕೀಲ ಕಪಿಲ್‌ ಸಿಬಲ್‌ ಸಮರ್ಥಿಸಿಕೊಂಡರು.

ಇ.ಡಿ ದಾಖಲಿಸಿರುವ ಪ್ರಕರಣದಲ್ಲಿ ಕಾರ್ತಿ ಪರ ವಾದಿಸಿದ ವಕೀಲ ಗೋಪಾಲ ಸುಬ್ರಮಣಿಯಂ ಅವರು, ‘ಎಲ್ಲ ವಿಚಾರಣೆಗೂ ಕಾರ್ತಿ ಸಹಕರಿಸಿದ್ದಾರೆ. ಹೀಗಾಗಿ ದೇಶ ತೊರೆಯುವ ಅಥವಾ ಸಾಕ್ಷ್ಯ ನಾಶ ಮಾಡುವ ಪ್ರಶ್ನೆಯೇ ಇಲ್ಲ’ ಎಂದರು.

ಐಎನ್‌ಎಕ್ಸ್‌ ಮಾಧ್ಯಮ ಹಗರಣದಲ್ಲಿ ಕಾರ್ತಿ ಅವರಿಗೆ ಶುಕ್ರವಾರ ಜಾಮೀನು ಮಂಜೂರಾಗಿತ್ತು. ನಂತರ, ಏರ್‌ಸೆಲ್‌–ಮ್ಯಾಕ್ಸಿಸ್‌ ಪ್ರಕರಣದಲ್ಲಿ ಸಿಬಿಐ ಹಾಗೂ ಇ.ಡಿ, ತಮ್ಮನ್ನು ಬಂಧಿಸಿದಂತೆ ಸೂಚಿಸಬೇಕೆಂದು ಕಾರ್ತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.