ಬರ್ದ್ವಾನ್/ಕೋಲ್ಕತ್ತ(ಪಶ್ಚಿಮ ಬಂಗಾಳ) (ಪಿಟಿಐ): ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಸೇರಿದಂತೆ ದೇಶದ ಉನ್ನತ ಭದ್ರತಾ ಹಾಗೂ ಗುಪ್ತಚಾರ ದಳ ಮುಖ್ಯಸ್ಥರು ಪಶ್ಚಿಮ ಬಂಗಾಳದ ಬರ್ದ್ವಾನ್ನಲ್ಲಿ ಅಕ್ಟೋಬರ್ 2ರಂದು ಸಂಭವಿಸಿದ್ದ ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಪ್ರಗತಿಯನ್ನು ಸೋಮವಾರ ಪರಿಶೀಲಿಸಿದರು.
ಸ್ಫೋಟ ಸಂಭವಿಸಿದ್ದ ಖಗ್ರಾಗಡ ಪ್ರದೇಶದಲ್ಲಿ ಸುಮಾರು 30 ನಿಮಿಷಕ್ಕೂ ಹೆಚ್ಚಿನ ಭೇಟಿಯ ವೇಳೆ ಡೊಭಾಲ್ ಅವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಧಾನ ನಿರ್ದೇಶಕ ಶರದ್ ಕುಮಾರ್, ರಾಷ್ಟ್ರೀಯ ಭದ್ರತಾ ಪಡೆಯ ಪ್ರಧಾನ ನಿರ್ದೇಶಕ ಜಯಂತ್ ನಾರಾಯಣ್ ಚೌಧರಿ ಹಾಗೂ ಗುಪ್ತಚಾರ ದಳದ ನಿರ್ದೇಶಕ ಸಯ್ಯದ್ ಆಸೀಫ್ ಇಬ್ರಾಹಿಂ ಅವರು ಸಾಥ್ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಡೊಭಾಲ್ ಹಾಗೂ ಇತರ ಮೂವರು ಹಿರಿಯ ಅಧಿಕಾರಿಗಳು ಸ್ಫೋಟ ನಡೆದ ಕೋಣೆಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ, ಶಂಕಿತರು ಪ್ರಯೋಗಾಲಯ ಮಾಡಿಕೊಂಡಿದ್ದ ಕೋಣೆಗೂ ತೆರಳಿ, ಅದರ ಟೆರಸ್ ಮೇಲೂ ಹತ್ತಿ ಸುತ್ತಲಿನಿಂದ ಗೋಚರಿಸುವ ಪ್ರದೇಶಗಳ ಬಗ್ಗೆಯೂ ತಪಾಸಣೆ ನಡೆಸಿದರು.
ಆ ಮನೆಯಲ್ಲಿ ವಾಸವಾಗಿದ್ದ ಶಂಕಿತರ ಇಬ್ಬರು ಮಕ್ಕಳ ಬಗ್ಗೆಯೂ ಡೊಭಾಲ್ ವಿಚಾರಿಸಿದರು. ಚಿಕ್ಕ ಮಕ್ಕಳನ್ನು ಅವರ ಅಮ್ಮಂದಿರ ಜತೆಗೆ ವಶಕ್ಕೆ ಪಡೆಯಲಾಗಿದೆ.
ಬಳಿಕ ಜಿಲ್ಲೆಯ ಅಧಿಕಾರಿಗಳನ್ನು ಭೇಟಿ ಮಾಡಿದ ಡೊಭಾಲ್, ತನಿಖೆಯ ಪ್ರಗತಿಯ ಬಗ್ಗೆಯೂ ವಿಚಾರಿಸಿದರು ಎಂದು ಪೊಲೀಸರು ಹೇಳಿದ್ದಾರೆ.
ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಲು ನಾಲ್ವರೂ ಅಧಿಕಾರಿಗಳು ಕೋಲ್ಕತ್ತಕ್ಕೆ ತೆರಳಿದ್ದಾರೆ.
ಬರ್ದ್ವಾನ್ ಪ್ರಕರಣದ ಬಗ್ಗೆ ಮಾಹಿತಿ ಕೇಳಿರುವ ಬಾಂಗ್ಲಾದೇಶಕ್ಕೆ ವರದಿ ರವಾನಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ನಾಲ್ವರು ಅಧಿಕಾರಿಗಳು ಸೋಮವಾರ ಭೇಟಿ ನೀಡಿದ್ದಾರೆ.
ಅಕ್ಟೋಬರ್ 2ರಂದು ಎರಡು ಮಹಡಿಯ ಕಟ್ಟಡದಲ್ಲಿ ಸ್ಫೋಟ ನಡೆದಿತ್ತು. ಘಟನೆಯಲ್ಲಿ ಇಬ್ಬರು ಶಂಕಿತ ಉಗ್ರರು ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಎನ್ಐಎ ತನಿಖೆ ನಡೆಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.