ಬಲಿಯಾ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ರ್ಯಾಲಿಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಧರಿಸಿದ್ದ ಬುರ್ಖಾವನ್ನು ಪೊಲೀಸರು ಬಲವಂತವಾಗಿ ತೆಗೆಸಿದ ಪ್ರಕರಣದ ತನಿಖೆಗೆ ಜಿಲ್ಲಾಡಳಿತ ಆದೇಶಿಸಿದೆ.
ಯೋಗಿ ಆದಿತ್ಯನಾಥ ಅವರು ರ್ಯಾಲಿಗೆ ಬರುವುದಕ್ಕಿಂತಲೂ ಮೊದಲು ಮಹಿಳೆ ಕಪ್ಪು ಬಣ್ಣದ ಬುರ್ಖಾವನ್ನು ತೆಗೆಯುತ್ತಿರುವ ವಿಡಿಯೊ ತುಣುಕು ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆಗೆ ಪೂರ್ವಭಾವಿಯಾಗಿ ಬಲಿಯಾದಲ್ಲಿ ಯೋಗಿ ಅವರ ರ್ಯಾಲಿಯನ್ನು ಮಂಗಳವಾರ ಆಯೋಜಿಸಲಾಗಿತ್ತು.
ಸಾಯಿರಾ ಬಾನು ಎಂದು ಗುರುತಿಸಲಾಗಿರುವ ಮಹಿಳೆ ನಂತರ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ‘ನಾನು ಧರಿಸಿದ್ದ ಕಪ್ಪು ಬುರ್ಖಾವನ್ನು ತೆಗೆಯಲು ಮಹಿಳಾ ಕಾನ್ಸ್ಟೆಬಲ್ಗಳು ಸೂಚಿದರು’ ಎಂದು ಅವರು ಹೇಳಿದ್ದರು.
ತಾನು ಬಿಜೆಪಿ ಕಾರ್ಯಕರ್ತೆಯಾಗಿದ್ದು, ಸಾಂಪ್ರದಾಯಿಕ ಧಿರಿಸಿನಲ್ಲಿ ರ್ಯಾಲಿಗೆ ಬಂದಿದ್ದಾಗಿ ಅವರು ಹೇಳಿದ್ದರು.
ಪೊಲೀಸ್ ಇಲಾಖೆ ಕೂಡ ಈ ಬಗ್ಗೆ ತನಿಖೆಗೆ ಆದೇಶಿಸಿದೆ.
‘ವಿಡಿಯೊ ದೃಶ್ಯಾವಳಿಯನ್ನು ಪಡೆದಿದ್ದೇವೆ. ಇಲಾಖಾ ತನಿಖೆಗೆ ಆದೇಶಿಸಲಾಗಿದೆ’ ಎಂದು ಬಲಿಯಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
‘ರ್ಯಾಲಿಯಲ್ಲಿ ಕಪ್ಪು ಬಾವುಟಗಳನ್ನು ಪ್ರದರ್ಶಿಸುವುದಕ್ಕೆ ಅವಕಾಶ ನೀಡಬಾರದು ಎಂದು ನಮಗೆ ಸೂಚನೆ ನೀಡಲಾಗಿತ್ತು. ಈ ವಿಚಾರವನ್ನು ನಾನು ಪರಿಶೀಲಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಮೂರು ದಿನಗಳ ಹಿಂದೆ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲು ಮೀರಠ್ಗೆ ತೆರಳಿದ್ದ ಸಂದರ್ಭದಲ್ಲಿ ಯೋಗಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.