ADVERTISEMENT

ಮಗನಿಗೆ ಬಡತನ ಪರಿಚಯಿಸಿದ ಶ್ರೀಮಂತ ಉದ್ಯಮಿ

ಹೈದರಾಬಾದ್‌ನಲ್ಲಿ ಒಂದು ತಿಂಗಳು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2017, 19:30 IST
Last Updated 12 ಆಗಸ್ಟ್ 2017, 19:30 IST
ಹಿತಾರ್ಥ
ಹಿತಾರ್ಥ   

ಹೈದರಾಬಾದ್‌: ಆತ ಶ್ರೀಮಂತ ಮನೆತನದ ಯುವಕ. ಸೂರತ್‌ನ ಕೋಟ್ಯಧಿಪತಿ ಕುಟುಂಬದ ಈ ಯುವಕ ಅಮೆರಿಕದ ನ್ಯೂಯಾರ್ಕ್‌ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿದ್ದ. ವಜ್ರ, ಚಿನ್ನವನ್ನೇ ನೋಡುತ್ತ ಬೆಳೆದ ಈ ಯುವಕನಿಗೆ ಬಡತನವೆನ್ನುವುದು ಗೊತ್ತೇ ಇರಲಿಲ್ಲ.

ಇಂತಹ ವಾತಾವರಣದಲ್ಲಿ ಬೆಳೆದ ಯುವಕ, ತಂದೆ ಹಾಕಿದ ಸವಾಲನ್ನು ಸ್ವೀಕರಿಸಿ ಬಡತನ, ಹಣದ ಮೌಲ್ಯ ಮತ್ತು ನಿರುದ್ಯೋಗ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಒಂದು ತಿಂಗಳು ಕಾಲ ಹೈದರಾಬಾದ್‌ನಲ್ಲಿ ಜೀವನ ಸಾಗಿಸಿದ. ಜನಸಾಮಾನ್ಯರ ಬದುಕು ಬವಣೆಗಳನ್ನು ಹತ್ತಿರದಿಂದ ನೋಡುವ ಜತೆಗೆ ತಾನೂ ಅನುಭವಿಸಿದ.

ಈತ 23 ವರ್ಷದ ಹಿತಾರ್ಥ ಧೋಲಕಿಯಾ. ವಜ್ರದ ವ್ಯಾಪಾರಿ ಘನಶ್ಯಾಮ ಧೋಲಕಿಯಾ ಅವರ ಏಳನೇ ಪುತ್ರ ಹಿತಾರ್ಥ. ಸೂರತ್‌ನ ಧೋಲಕಿಯಾ ಕುಟುಂಬ ₹6 ಸಾವಿರ ಕೋಟಿ ಮೌಲ್ಯದ ‘ಹರೇ ಕೃಷ್ಣಾ ಡೈಮಂಡ್‌ ಎಕ್ಸ್‌ಪೋರ್ಟ್‌’ನ ಸಂಸ್ಥಾಪಕರು. ಈ ಕಂಪೆನಿ 71 ದೇಶಗಳಲ್ಲಿ ವಹಿವಾಟು ನಡೆಸುತ್ತಿದೆ.

ADVERTISEMENT

ಒಂದು ದಿನ ಘನಶ್ಯಾಮ ಅವರು ತಮ್ಮ ಪುತ್ರನಿಗೆ ವಿಭಿನ್ನವಾದ ವಾತಾವರಣದಲ್ಲಿ ಒಂದು ತಿಂಗಳು ಕಾಲ ಜೀವನ ಸಾಗಿಸಬೇಕು. ಈ ಸಮಯದಲ್ಲಿ ಮೊಬೈಲ್‌ ದೂರವಾಣಿ ಬಳಸಬಾರದು ಮತ್ತು ಧೋಲಕಿಯಾ ಕುಟುಂಬದ ಹೆಸರನ್ನು ಯಾವುದೇ ಕಾರಣಕ್ಕೂ ಉಪಯೋಗಿಸಿಕೊಳ್ಳಬಾರದು ಎಂದು ಸವಾಲು ಹಾಕಿದರು.

ಈ ಒಂದು ತಿಂಗಳ ಬದುಕು ಹೈದರಾಬಾದ್‌ನಲ್ಲಿ ಸಾಗಿಸಬೇಕಾಗುತ್ತದೆ ಎನ್ನುವುದು ಹಿತಾರ್ಥ ಅವರಿಗೆ ಮುಂಚಿತವಾಗಿ ಗೊತ್ತೇ ಇರಲಿಲ್ಲ. ಮುಂಬೈ ವಿಮಾನ ನಿಲ್ದಾಣದಲ್ಲಿದ್ದಾಗ ಹಿತಾರ್ಥ ಅವರಿಗೆ ಹೈದರಾಬಾದ್‌ಗೆ ತೆರಳುವಂತೆ ತಂದೆ ಘನಶ್ಯಾಮ ಸೂಚಿಸಿದರು.

ಶಂಷಾಬಾದ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜುಲೈ 10ರಂದು  ಹಿತಾರ್ಥ್‌ ಬಂದಿಳಿದಿದರು. ಆಗಇವರ ಜೇಬಿನಲ್ಲಿ ಇದ್ದದ್ದು ಕೇವಲ ₹500.

‘ಮೊದಲ ಬಾರಿ ಹೈದರಾಬಾದ್‌ ನೋಡಿದ್ದೆ. ಸ್ಥಳೀಯ ತಿಂಡಿ ತಿನಿಸುಗಳು ಮತ್ತು ಭಾಷೆ ಗೊತ್ತೇ ಇರಲಿಲ್ಲ. ವಿಮಾನ ನಿಲ್ದಾಣದಿಂದ ಆತ್ಮವಿಶ್ವಾಸದೊಂದಿಗೆ ಹೊರಗೆ ಹೆಜ್ಜೆ ಹಾಕಿ ತಂದೆಯ ಸವಾಲು ಸ್ವೀಕರಿಸಿದೆ’ ಎಂದು ತಮ್ಮ ಅನುಭವಗಳನ್ನು ಹಿತಾರ್ಥ ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ.

‘ಯಾರಿಗೂ ನನ್ನ ಮೂಲ ಗುರುತನ್ನು ಹೇಳಬಾರದು ಎಂದು  ತಂದೆ ಸೂಚಿಸಿದ್ದರು ಮತ್ತು ಒಂದು ವಾರಕ್ಕಿಂತ ಹೆಚ್ಚು ಕಾಲ ಒಂದೇ ಉದ್ಯೋಗದಲ್ಲಿರಬಾರದು ಎಂದು ತಿಳಿಸಿದ್ದರು. ಹೀಗಾಗಿ ಬದುಕಲು ಏನಾದರೂ ಒಂದು ಉದ್ಯೋಗ ಕಂಡುಕೊಳ್ಳಲೇಬೇಕಾಗಿತ್ತು’ ಎಂದು ವಿವರಿಸಿದರು.

‘ಹೈದರಾಬಾದ್‌ ಮತ್ತು ಸಿಕಂದರಾಬಾದ್‌ ನಗರಗಳ ಮಾಹಿತಿಯನ್ನು ಮೊದಲು ಸಂಗ್ರಹಿಸಿದೆ. ಬಳಿಕ ಸಿಕಂದರಾಬಾದ್‌ಗೆ ತೆರಳಿ ಕಡಿಮೆ ಬೆಲೆಯ ಹೋಟೆಲ್‌ವೊಂದರಲ್ಲಿ ಕೊಠಡಿ ಪಡೆದೆ. ನಾನು ಗುಜರಾತ್‌ನ ಬಡರೈತನ ಮಗನಾಗಿದ್ದು, ಉದ್ಯೋಗ ಅರಸಿ ಇಲ್ಲಿಗೆ ಬಂದಿದ್ದೇನೆ ಎಂದು ಹೋಟೆಲ್‌ ಮ್ಯಾನೇಜರ್‌ಗೆ ತಿಳಿಸಿದೆ. ಆರಂಭದಲ್ಲಿ ಮ್ಯಾಕ್‌ಡೊನಾಲ್ಡ್‌ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದೆ. ಬಳಿಕ ಮಾರ್ಕೆಟಿಂಗ್‌ ಕಂಪೆನಿಯಲ್ಲಿ ಡೆಲಿವರಿ ಬಾಯ್‌ ಕೆಲಸಕ್ಕೆ ಸೇರಿಕೊಂಡೆ. ಮತ್ತೆ ಉದ್ಯೋಗ ಬದಲಾಯಿಸಿ ಅಡಿದಾಸ್‌ ಶೂ ಕಂಪೆನಿ ಮತ್ತು ಜಡೆ ಬ್ಲೂ ಶೋರೂಂನಲ್ಲಿ ಸೇಲ್ಸ್‌ಮನ್‌ ಕೆಲಸಕ್ಕೆ ಸೇರಿದೆ’ ಎಂದು ವಿವರಿಸಿದರು.

‘ನನಗೆ ಉದ್ಯೋಗ ನೀಡಿದ ಎಲ್ಲರೂ ಹೃದಯವಂತವರಾಗಿದ್ದರು. ಆದರೆ, ನನ್ನ ಕುಟುಂಬದ ವಿವರಗಳ ಬಗ್ಗೆ ಹತ್ತಾರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಅಪರಿಚತನಿಗೆ ಕೆಲಸ ನೀಡುವಾಗ ಈ ರೀತಿ ಪ್ರಶ್ನೆ ಕೇಳುವುದು ಸಹಜ. ಒಂದು ತಿಂಗಳಲ್ಲಿ ರಸ್ತೆಯ ಬದಿ ತಿಂಡಿ ತಿನಿಸುಗಳ ರುಚಿ ಅನುಭವಿಸಿದೆ ಮತ್ತು ಸ್ಥಳೀಯ ಬಸ್‌ಗಳಲ್ಲಿ ಸಂಚರಿಸಿದೆ.ಹೈದರಾಬಾದ್‌ಗೆ ಬಂದಾಗ ₹500 ಇತ್ತು. ಈಗ ನನ್ನಲ್ಲಿ ₹5 ಸಾವಿರ ಇದೆ. ಇಲ್ಲಿ ದೊರೆತ ಅನುಭವ ನನ್ನ ಉದ್ಯಮದಲ್ಲೂ ನೆರವಿಗೆ ಬರುತ್ತದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.