ಹೈದರಾಬಾದ್ (ಪಿಟಿಐ): ತೆಲಂಗಾಣ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ಎಸ್) ಶಾಸಕ ಎಸ್. ಮಧುಸೂಧನಾಚಾರಿ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.
119 ಸದಸ್ಯರು ಒಮ್ಮತದಿಂದ ಮಧುಸೂಧನಾಚಾರಿ ಅವರನ್ನು ಸಭಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆರಿಸಿದರು. ಬಳಿಕ ಹಂಗಾಮಿ ಸಭಾಧ್ಯಕ್ಷ ಕೆ. ಜನರೆಡ್ಡಿ ಅವರು ಮಧುಸೂಧನಾಚಾರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಮತ್ತು ಪ್ರತಿಪಕ್ಷದ ಮುಖಂಡರು ಮಧುಸೂಧನಾಚಾರಿ ಅವರನ್ನು ಅಭಿನಂದಿಸಿದರು.
ಮಧುಸೂಧನಾಚಾರಿ ಅವರು ವಾರಂಗಲ್ ಜಿಲ್ಲೆಯ ಭೂಪಾಲಪಲ್ಲಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2001ರಿಂದ ಟಿಆರ್ಎಸ್ ಸದಸ್ಯರಾಗಿ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಅವರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಇಷ್ಟೇ ಅಲ್ಲದೆ ಈ ಹಿಂದೆ 1998 ರಿಂದ 1999ರವರೆಗೆ ಟಿಡಿಪಿ ಶಾಸಕರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.