ADVERTISEMENT

ಮನುಷ್ಯರಿಗಿಂತ ಜಾನುವಾರುಗಳೇ ಅಮೂಲ್ಯ!

ಪಿಟಿಐ
Published 29 ಮೇ 2017, 20:28 IST
Last Updated 29 ಮೇ 2017, 20:28 IST
ಹಸುವಿಗೆ ಚಿಕಿತ್ಸೆ ನೀಡುತ್ತಿರುವ ಭಾರತೀಯ ಪಡೆ ಯೋಧರು
ಹಸುವಿಗೆ ಚಿಕಿತ್ಸೆ ನೀಡುತ್ತಿರುವ ಭಾರತೀಯ ಪಡೆ ಯೋಧರು   

ನವದೆಹಲಿ: ದಕ್ಷಿಣ ಸುಡಾನ್‌ನ ಸಾಮಾಜಿಕ ವ್ಯವಸ್ಥೆಯಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ಥಿತಿಗೆ ತೈಲವಾಗಲಿ ಅಥವಾ  ಪ್ರಾಂತೀಯ ಕಲಹವಾಗಲಿ ಕಾರಣ ಅಲ್ಲ, ಬದಲಿಗೆ ಜಾನುವಾರುಗಳು ಕಾರಣ!

ವಿಶ್ವಸಂಸ್ಥೆಯು ದಕ್ಷಿಣ ಸುಡಾನ್‌ನಲ್ಲಿ ನೇಮಕ ಮಾಡಿರುವ ಭಾರತೀಯ ಶಾಂತಿಪಾಲನಾ ಪಡೆಯ ಸದಸ್ಯರು ಈ ವಿಷಯವನ್ನು ತಿಳಿಸಿದ್ದಾರೆ.

‘ಹಸುಗಳನ್ನು ಮನುಷ್ಯರಿಗಿಂತ ಹೆಚ್ಚು ಅಮೂಲ್ಯ ಎಂದು ಅಲ್ಲಿನ ದನಗಾಹಿ ಸಮುದಾಯ ಪರಿಗಣಿಸುತ್ತದೆ. ದನಗಾಹಿ ಸಮುದಾಯವೇ ಹೆಚ್ಚಿರುವ ಅಲ್ಲಿ ಕೊಲೆಯಂತಹ ಅಪರಾಧಕ್ಕೆ ಹಸುಗಳನ್ನು ದಂಡದ ರೂಪದಲ್ಲಿ ನೀಡಿ ಶಿಕ್ಷೆ ಅನುಭವಿಸಬೇಕು’ ಎಂದು ಪಡೆಯಲ್ಲಿರುವ ಭಾರತೀಯ ಅಧಿಕಾರಿ ಮಯೂರ್‌ ಶೇಕತ್ಕರ್‌ ಹೇಳಿದ್ದಾರೆ.

ಹಸುಗಳನ್ನು ವರದಕ್ಷಿಣೆ ರೂಪದಲ್ಲೂ ಬಳಸಲಾಗುತ್ತದೆ. ಕನಿಷ್ಠ 200 ಹಸುಗಳನ್ನು ಹೊಂದಿರುವ  ಯುವಕ ಮದುವೆ ಮಾಡಿಕೊಳ್ಳಲು ಅರ್ಹ ಎಂದು   ಅಲ್ಲಿ ಪರಿಗಣಿಸಲಾಗುತ್ತದೆ ಎಂಬ ಅಂಶವನ್ನೂ ಅವರು ತಿಳಿಸಿದ್ದಾರೆ.

ಭೀಕರ ಕ್ಷಾಮ ಮತ್ತು ಹಸಿವಿನ ಸಮಸ್ಯೆಗಳಿಂದ  ಬಳಲುತ್ತಿರುವ ದಕ್ಷಿಣ ಸುಡಾನ್‌ನಲ್ಲಿ   ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿದೆ. ಇಷ್ಟಾದರೂ, ಕಳೆದ ಕೆಲವು ತಿಂಗಳುಗಳಲ್ಲಿ ಸುಮಾರು 10,000 ಹಸುಗಳಿಗೆ ಚಿಕಿತ್ಸೆ ಮಾಡಲಾಗಿದೆ. ಆದರೆ ಚಿಕಿತ್ಸೆಗೆ ಬಂದ ಜನರ ಸಂಖ್ಯೆ ಕೇವಲ 2,000 ಎಂದು, ಪರಿಸ್ಥಿತಿಯ ತೀವ್ರತೆಯನ್ನು ಅಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಆನಂದ ಶೆಲ್ಕೆ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.