ADVERTISEMENT

ಮಲ್ಯ ವಿರುದ್ಧ ‘ಇ.ಡಿ’ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2016, 19:59 IST
Last Updated 7 ಮಾರ್ಚ್ 2016, 19:59 IST

ಮುಂಬೈ (ಪಿಟಿಐ): ಮದ್ಯದ ದೊರೆ ವಿಜಯ್‌ ಮಲ್ಯ ಅವರಿಗೆ ಹೊಸ  ಕಂಟಕಗಳು ಎದುರಾಗಿದ್ದು, ಜಾರಿ ನಿರ್ದೇಶನಾಲಯವು (ಇ.ಡಿ) ಹಣ ಲೇವಾದೇವಿ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಐಡಿಬಿಐ ಬ್ಯಾಂಕ್‌ನಿಂದ ಪಡೆದ ₹ 900 ಕೋಟಿ ಸಾಲವನ್ನು ಮರು ಪಾವತಿಸದ ಪ್ರಕರಣದಲ್ಲಿ ವಿಜಯ್‌ ಮಲ್ಯ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣ ಸಂಬಂಧ  ಸಿಬಿಐ ಕಳೆದ ವರ್ಷ ದಾಖಲಿಸಿದ್ದ ಎಫ್‌ಐಆರ್‌ ಆಧರಿಸಿ ಹಣ ಲೇವಾದೇವಿ  ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯದ ಮುಂಬೈ ಪ್ರಾದೇಶಿಕ ಕಚೇರಿಯು  ಪ್ರಕರಣ ದಾಖಲಿಸಿದೆ. ಸದ್ಯಕ್ಕೆ ಹಾರಾಟ ಸ್ಥಗಿತಗೊಳಿಸಿರುವ ಕಿಂಗ್‌ಫಿಷರ್‌ ಏರ್‌ಲೈನ್ಸ್‌ನ  ಒಟ್ಟಾರೆ ಹಣಕಾಸು ಸ್ವರೂಪದ ಬಗ್ಗೆ  ನಿರ್ದೇಶನಾಲಯದ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

ಜತೆಗೆ ವಿದೇಶ ವಿನಿಮಯ ಉಲ್ಲಂಘನೆ ಆರೋಪದಡಿ ಪ್ರತ್ಯೇಕ ತನಿಖೆ ನಡೆಸಲು ಉದ್ದೇಶಿಸಲಾಗಿದೆ. ಪ್ರಕರಣ ಸಂಬಂಧ ಮಲ್ಯ ಮತ್ತು ಇತರರನ್ನು ಶೀಘ್ರವೇ ಪ್ರಶ್ನಿಸಲಾಗುವುದು. ನಿರ್ದೇಶನಾಲಯವು ಅಗತ್ಯ ದಾಖಲೆಗಳನ್ನೂ ಸಂಗ್ರಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಿಂಗ್‌ಫಿಷರ್‌ ಏರ್‌ಲೈನ್ಸ್‌ನ ನಿರ್ದೇಶಕರಾಗಿದ್ದ ಮಲ್ಯ, ಏರ್‌ಲೈನ್ಸ್‌ನ ಮುಖ್ಯ ಹಣಕಾಸು ಅಧಿಕಾರಿ ಎ. ರಘುನಾಥ ಮತ್ತು ಐಡಿಬಿಐ ಬ್ಯಾಂಕ್‌ನ ಅನಾಮಧೇಯ ಅಧಿಕಾರಿ ವಿರುದ್ಧ ಸಿಬಿಐ, ಎಫ್‌ಐಆರ್‌ ದಾಖಲಿಸಿತ್ತು. ಸಾಲದ ಮಿತಿಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿ ಏರ್‌ಲೈನ್ಸ್‌ಗೆ ಸಾಲ ವಿತರಿಸಿದ ಪ್ರಕರಣ ಇದಾಗಿದೆ.

ಉದ್ಯೋಗಿಗಳ ದೂರು: ತಮಗೆ ಬರಬೇಕಾದ ಭತ್ಯೆ ಮತ್ತು ಸೇವಾ ಸೌಲಭ್ಯಗಳ ವಿಷಯದಲ್ಲಿ ಮಲ್ಯ ಅವರು ತಮ್ಮನ್ನು ವಂಚಿಸಿದ್ದಾರೆ ಎಂದು ಕಿಂಗ್‌ಫಿಷರ್‌ ಏರ್‌ಲೈನ್ಸ್‌ನ ಮಾಜಿ ನೌಕರರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.