ಹೈದರಾಬಾದ್: ಮುಸ್ಲಿಂ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದ ಮಸೂದೆಗೆ ತೆಲಂಗಾಣ ವಿಧಾನಸಭೆಯ ವಿಶೇಷ ಅಧಿವೇಶನವು ಅನುಮೋದನೆ ನೀಡಿದೆ.
ಈ ಉದ್ದೇಶಕ್ಕಾಗಿಯೇ ಕರೆಯ ಲಾಗಿದ್ದ ಒಂದು ದಿನದ ಅಧಿವೇಶನದಲ್ಲಿ ಹಿಂದುಳಿದ ಮುಸ್ಲಿಮರಿಗೆ ಈಗಿರುವ ಶೇ 4ರಷ್ಟು ಮೀಸಲಾತಿಯನ್ನು ಶೇ 12ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 6ರಿಂದ 10ಕ್ಕೆ ಏರಿಸುವ ಪ್ರಸ್ತಾವದ ಮಸೂದೆಯನ್ನು ಅವಿರೋಧವಾಗಿ ಅಂಗೀಕರಿಸಲಾಯಿತು.
ಮಸೂದೆಯನ್ನು ವಿರೋಧಿಸಿ ಸಭಾಧ್ಯಕ್ಷರ ಪೀಠದ ಎದುರು ಪ್ರತಿಭಟನೆ ನಡೆಸಿದ ಬಿಜೆಪಿಯ ಐವರು ಶಾಸಕರನ್ನು ಅಮಾನತು ಮಾಡಲಾಯಿತು.
ಕಾಂಗ್ರೆಸ್, ಮಜಲಿಸ್ ಮತ್ತು ಎಡಪಕ್ಷಗಳು ಮಸೂದೆಗೆ ಬೆಂಬ ಸೂಚಿಸಿದವು.
ವಿಶ್ವಾಸ: ಮಸೂದೆಯನ್ನು ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು, ‘ತಮಿಳುನಾಡಿನಲ್ಲಿ ಜಾರಿ ಇರುವ ಮೀಸಲಾತಿ ಪದ್ಧತಿಯನ್ನೇ ಈ ಮಸೂದೆಯಲ್ಲಿ ಅಳವಡಿಸಲಾಗಿದ್ದು, ಕೇಂದ್ರ ಸರ್ಕಾರವು ಇದಕ್ಕೆ ಒಪ್ಪಿಗೆ ನೀಡಬೇಕಾಗುತ್ತದೆ’ ಎಂದರು.
‘ತಮಿಳುನಾಡಿನಲ್ಲಿ ಶೇ 69ರಷ್ಟು ಮೀಸಲಾತಿ ಜಾರಿಯಲ್ಲಿ ಇರುವುದರಿಂದ ಶೇಕಡ 62ರಷ್ಟು ಮೀಸಲಾತಿಗೆ ಅವಕಾಶ ನೀಡುವ ಈ ಮಸೂದೆಗೆ ಕೇಂದ್ರ ಒಪ್ಪಿಗೆ ದೊರಕುತ್ತದೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.