ADVERTISEMENT

ಮೋದಿಗೆ ಅಭಿನಂದಿಸಿ ಎಂ.ವಿ.ರಾಜಶೇಖರನ್‌ ಪತ್ರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST
ಮೋದಿಗೆ ಅಭಿನಂದಿಸಿ  ಎಂ.ವಿ.ರಾಜಶೇಖರನ್‌ ಪತ್ರ
ಮೋದಿಗೆ ಅಭಿನಂದಿಸಿ ಎಂ.ವಿ.ರಾಜಶೇಖರನ್‌ ಪತ್ರ   

ನವದೆಹಲಿ: ನರೇಂದ್ರ ಮೋದಿ ಅವರ ಆಡಳಿತ ವೈಖರಿಗೆ ಮಾರುಹೋಗಿ ಬಿಜೆಪಿಗೆ ಸೇರಿದ್ದಾಗಿ ಎಸ್‌.ಎಂ. ಕೃಷ್ಣ ತಿಳಿಸಿರುವುದರ ಬೆನ್ನಲ್ಲೇ ಕಾಂಗ್ರೆಸ್‌ನ ಇನ್ನೊಬ್ಬ ಮುಖಂಡ ಎಂ.ವಿ. ರಾಜಶೇಖರನ್‌, ಪಂಚ ರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಉತ್ತರ ಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರದ ಮಾಜಿ ಸಚಿವರೂ ಆಗಿರುವ ರಾಜಶೇಖರನ್‌ ಪತ್ರ ಬರೆದು ಹಾಡಿಹೊಗಳಿದ್ದಾರೆ.

‘ನಿಮ್ಮ ಆಡಳಿತದ ಅವಧಿಯಲ್ಲಿ ದೇಶ ಅಭಿವೃತ್ತಿಯತ್ತ ಸಾಗಲಿ. ನವಭಾರತ ನಿರ್ಮಾಣವಾಗಲಿ. ಯುವಜನರ ಆಶಯಕ್ಕೆ ತಕ್ಕಂತೆ ಆಡಳಿತ ನೀಡುತ್ತಿರುವ ನೀವು ದೇಶದ ಅಭಿವೃದ್ಧಿಗಾಗಿ ಮಧ್ಯಮ ವರ್ಗದ ಸಹಕಾರ ಕೋರಿರುವುದು ಸಮಯೋಚಿತವಾಗಿದೆ’ ಎಂದು ತಿಳಿಸಿರುವ ಅವರು, ‘ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಿಮಗೆ ಉತ್ತಮ ಆರೋಗ್ಯ ದೊರೆಯಲಿ’ ಎಂದು ಹಾರೈಸಿದ್ದಾರೆ.

ADVERTISEMENT

ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಪ್ರಕಟವಾದ ಎರಡು ದಿನಗಳ ನಂತರ (ಮಾರ್ಚ್‌ 13ರಂದು) ಮೋದಿ ಹಾಗೂ ಕೇಂದ್ರಸಚಿವ ಎಂ.ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿರುವ ರಾಜಶೇಖರನ್‌, ಎಸ್‌.ಎಂ. ಕೃಷ್ಣ ಅವರಿಗೆ ಆಪ್ತರು ಎಂಬುದೂ ವಿಶೇಷ.

ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ಕೇಂದ್ರದ ಯೋಜನಾ ಖಾತೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದ ಇವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ.ಎಸ್‌.ನಿಜಲಿಂಗಪ್ಪ ಅವರ ಅಳಿಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.