ಕನ್ನಿಂಗ್, ಪಶ್ಚಿಮ ಬಂಗಾಳ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಜಾಪ್ರಭುತ್ವ ಮತ್ತು ಬಹುತ್ವಕ್ಕೆ ಇರುವ ‘ಬೆದರಿಕೆ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.
ಇಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಇಬ್ಬರಿಗೂ ಹಿಂದಿನ ಸರ್ಕಾರಗಳನ್ನು ದೂರುವ ‘ಚಾಳಿ’ ಇದೆ ಎಂದು ಟೀಕಿಸಿದರು.
‘ಮೋದಿ ಹಾಗೂ ಮಮತಾ ನಡುವಣ ನಂಟು ಪಶ್ಚಿಮ ಬಂಗಾಳಕ್ಕೆ ಅಪಾಯ. ಗರ್ವ ಹೊಂದಿರುವ ಈ ಎರಡೂ ಶಕ್ತಿಗಳು, ಪ್ರಜಾಪ್ರಭುತ್ವಕ್ಕೆ ಬೆದರಿಕೆ. ಮೋದಿ ಸರ್ಕಾರದ ನಡವಳಿಕೆ ದೇಶದ ಮೂಲಭೂತ ಆಧಾರಗಳಾದ ಜಾತ್ಯತೀತತೆ, ಪ್ರಜಾಪ್ರಭುತ್ವ ಹಾಗೂ ತಲೆಮಾರುಗಳ ಸಂಸ್ಕೃತಿಗೆ ಅಪಾಯ ಒಡ್ಡಿದೆ’ ಎಂದು ಆರೋಪಿಸಿದರು.
ಮಮತಾ ವಿರುದ್ಧವೂ ಹರಿಹಾಯ್ದ ಸೋನಿಯಾ, ‘ಹುಸಿ ಭರವಸೆ ಹಾಗೂ ವಾಗ್ದಾನಗಳ ಮೂಲಕ ಐದು ವರ್ಷಗಳ ಹಿಂದೆ ಟಿಎಂಸಿಯು ನಿಮ್ಮ ಮತಗಳನ್ನು ಕೇಳಿತ್ತು. ಇದೀಗ ನಿಮ್ಮನ್ನು ಬೆದರಿಸುವ ಮೂಲಕ ಅದು ಮತಗಳನ್ನು ಕೇಳುತ್ತಿದೆ. ಅವರಂತೆಯೇ ಮೋದಿ ಅವರೂ ಎರಡು ವರ್ಷಗಳ ಹಿಂದೆ ಕನಸುಗಳ ಬಗ್ಗೆ ಮಾತನಾಡಿದ್ದರು’ ಎಂದು ಜರೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.