ADVERTISEMENT

ಮೋದಿ ವಿರುದ್ಧ ರಾಹುಲ್ ವಾಕ್ ಸಮರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 10:40 IST
Last Updated 19 ಏಪ್ರಿಲ್ 2015, 10:40 IST
ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ಕಿಸಾನ್ ಕೇತ್ ಮಜ್ದೂರ್ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು ಪಕ್ಷದ ಮುಖಂಡರಿಂದ ನೆಗಿಲು ಸ್ವೀಕರಿಸಿದರು. - ಎಎಫ್ ಪಿ ಚಿತ್ರ
ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ಕಿಸಾನ್ ಕೇತ್ ಮಜ್ದೂರ್ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು ಪಕ್ಷದ ಮುಖಂಡರಿಂದ ನೆಗಿಲು ಸ್ವೀಕರಿಸಿದರು. - ಎಎಫ್ ಪಿ ಚಿತ್ರ   

ನವದೆಹಲಿ(ಪಿಟಿಐ): ಭೂಸ್ವಾಧೀನ ತಿದ್ದುಪಡಿ ಮಸೂದೆ ‘ರೈತ ವಿರೋಧಿ’ ಹಾಗೂ ‘ಉದ್ಯಮಿಗಳ ಪರ’ವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸುಗ್ರೀವಾಜ್ಞೆ ಮೂಲಕ ರೈತರ ಭೂಮಿಯನ್ನು ಉದ್ಯಮಿಗಳಿಗೆ ‘ಕೊಡುಗೆ’ಯಾಗಿ ನೀಡಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಮಸೂದೆ ವಿರುದ್ಧ ಪೂರ್ಣಪ್ರಮಾಣದ ಯುದ್ಧ ಸಾರಿದ್ದಾರೆ.

ಸಾರ್ವಜನಿಕ ಜೀವನದಿಂದ ಎರಡು ತಿಂಗಳು ದೂರ ಉಳಿದಿದ್ದ ರಾಹುಲ್ ಅವರು ಇಲ್ಲಿನ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ಕಿಸಾನ್ ಕೇತ್ ಮಜ್ದೂರ್ ರ್ಯಾಲಿಯಲ್ಲಿ ಮಾತನಾಡಿ, ಸರ್ಕಾರ ಜಾರಿಗೆ ತರಲು ಮುಂದಾಗಿರುವ ನೂತನ ಭೂಸ್ವಾಧೀನ ತಿದ್ದುಪಡಿ ಮಸೂದೆಯು ರೈತ ವಿರೋಧಿ ಮಾತ್ರವಲ್ಲ ಬುಡಕಟ್ಟು ಜನರ ವಿರೋಧೀಯೂ ಆಗಿದೆ ಎಂದು ಆರೋಪಿಸಿದ್ದಾರೆ.

ಮೋದಿ ಅವರು ಚುನಾವಣೆಯಲ್ಲಿ ಹೇಗೆ ಜಯ ಗಳಿಸಿದರು ಎಂದು ಹೇಳುತ್ತೇನೆ ಎಂದ ರಾಹುಲ್, ಮೋದಿ ಅವರು ಚುನಾವಣೆಗಾಗಿ ಮಾರುಕಟ್ಟೆ ತಂತ್ರ ಬಳಸಿ ಉದ್ಯಮಿಗಳಿಂದ ಸಾವಿರಾರು ಕೋಟಿ ರೂ ಸಾಲ ಪಡೆದಿದ್ದಾರೆ. ಈಗ ಅವರು ಸಾಲವನ್ನು ತೀರಿಸುವುದು ಹೇಗೆ? ಆ ಸಾಲ ತೀರಿಸಲು ನಿಮ್ಮ (ರೈತರ) ಭೂಮಿಯನ್ನು ಉದ್ಯಮಿಗಳಿಗೆ ನೀಡಲು ಮುಂದಾಗಿದ್ದಾರೆ. ಅದಕ್ಕಾಗಿ ಅವರು ಭೂಸ್ವಾಧೀನ ತಿದ್ದುಪಡಿ ಮಸೂದೆ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಿದ್ದಾರೆ ಎಂದು ಟೀಕಿಸಿದರು.

ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತನಾಡಿ, ಸರ್ಕಾರ ಭೂಸ್ವಾಧೀನ ಮಸೂದೆ ಜಾರಿ ಮಾಡಲು ಮುಂದಾಗಿದ್ದು, ರೈತರನ್ನು ಗಾಯಗೊಳಿಸಿ ಅಪಮಾನಗೊಳಿಸುವ ಕೆಲಸ ಮಾಡುತ್ತಿದೆ. ಮೋದಿ ಸರ್ಕಾರ ಬಡವರು, ರೈತರು, ಅಸಹಾಯಕರ ವಿರುದ್ಧವಾಗಿದೆ. ಇಂದು ನಮಗೆ ಹೊಸ ಶಕ್ತಿ ಸಿಕ್ಕಿದೆ. ನಾವು ಬಡವರು ಮತ್ತು ದುರ್ಬಲರ ಪರ ಹೋರಾಡುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.