ADVERTISEMENT

ಮೋಹನ್ ಭಾಗವತ್ ಭೇಟಿಯಾದ ರಾಜನಾಥ್‌

​ಪ್ರಜಾವಾಣಿ ವಾರ್ತೆ
Published 28 ಮೇ 2014, 11:14 IST
Last Updated 28 ಮೇ 2014, 11:14 IST

ನವದೆಹಲಿ (ಪಿಟಿಐ): ಕೇಂದ್ರದಲ್ಲಿ ನೂತನ ಸರ್ಕಾರ ರಚನೆಯಾದ ಬೆನ್ನಲ್ಲೇ ಭಾರತೀಯ ಜನತಾ ಪಕ್ಷದಲ್ಲಿ (ಬಿಜೆಪಿ) ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆಗಳು ಗರಿಗೆದರಿದ್ದು, ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಬುಧವಾರ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಸಂಘ ಪರಿವಾರದ ಇತರ ಮುಖಂಡರನ್ನು ಭೇಟಿ ಮಾಡಿದ್ದಾರೆ.

ಭಾಗವತ್‌ ಅವರೊಂದಿಗೆ ಮಾತುಕತೆ ನಡೆಸಿದ ಮೋದಿ ಅವರ ಸಂಪುಟದಲ್ಲಿ ಮಹತ್ವದ ಗೃಹ ಖಾತೆಯ ಹೊಣೆ ವಹಿಸಿಕೊಂಡಿರುವ ರಾಜನಾಥ್ ಅವರು ‘ತಮ್ಮ ಬಳಿಕ ಬಿಜೆಪಿ ಮುಖ್ಯಸ್ಥರ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬುದು ಸೇರಿದಂತೆ ಸರ್ಕಾರ ರಚನೆಯ ಬಳಿಕ ಪಕ್ಷದಲ್ಲಿನ ಇತರ ಬದಲಾವಣೆಗಳ ಕುರಿತು ಚರ್ಚಿಸಿದರು.

ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಜೆ.ಪಿ.ನಡ್ಡಾ, ಅಮಿತ್‌ ಷಾ ಹಾಗೂ ಅರುಣ್‌  ಮಾಥೂರ್ ಅವರ ಹೆಸರುಗಳು ಬಿಜೆಪಿ ರಾಷ್ಟ್ರಾಧ್ಯಕ್ಷರ ಸ್ಥಾನಕ್ಕೆ ಕೇಳಿ ಬರುತ್ತಿದ್ದು, ಇದರಲ್ಲಿ ನಡ್ಡಾ ಅವರ ಹೆಸರು ಮುಂಚೂಣಿಯಲ್ಲಿದೆ.

ADVERTISEMENT

ಭಾಗವತ್ ಅವರ ಭೇಟಿಯ ಬೆನ್ನಲ್ಲೇ ಪ್ರಧಾನಿ  ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ರಾಜನಾಥ್, ಸಂಘ ಪರಿವಾರದ ನಾಯಕರೊಡನೆ ನಡೆಸಿದ ಚರ್ಚೆಯ ಕುರಿತು ವಿವರಿಸಿದ್ದಾರೆ.

ಭಾಗವತ್‌ –ರಾಜನಾಥ್‌ ಅವರ ಚರ್ಚೆಯ ವೇಳೆ ಆರ್‌ಎಸ್‌ಎಸ್ ಮುಖಂಡ ಸುರೇಶ್ ಸೋನಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.