ADVERTISEMENT

ರಜನಿಕಾಂತ್ ವಿರುದ್ಧ ಪ್ರತಿಭಟನೆ

ಪಿಟಿಐ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ರಜನಿಕಾಂತ್ ವಿರುದ್ಧ ಪ್ರತಿಭಟನೆ
ರಜನಿಕಾಂತ್ ವಿರುದ್ಧ ಪ್ರತಿಭಟನೆ   

ಚೆನ್ನೈ: ರಜನಿಕಾಂತ್ ಅವರ ಸಂಭಾವ್ಯ ರಾಜಕೀಯ  ಪ್ರವೇಶ ವಿರೋಧಿಸಿ ತಮಿಳುಪರ ಸಂಘಟನೆಗಳು ಸೋಮವಾರ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದವು.

ಇಲ್ಲಿನ ಪೋಯೆಸ್ ಗಾರ್ಡನ್‌ನಲ್ಲಿರುವ ರಜನಿಕಾಂತ್ ನಿವಾಸಕ್ಕೆ ಮುತ್ತಿಗೆ ಹಾಕಲು ತಮಿಳರ್ ಮುನ್ನೇತ್ರ ಪಡೈ ಸಂಘಟನೆ ಕಾರ್ಯಕರ್ತರು ಮುಂದಾದರು. ಹೀಗಾಗಿ ರಜನಿ ನಿವಾಸಕ್ಕೆ ಪೊಲೀಸ್ ಭದ್ರತೆ ಹೆಚ್ಚಿಸಲಾಯಿತು.

ಕೆಥಡ್ರಲ್ ರಸ್ತೆಯಲ್ಲಿ ರಜನಿ ವಿರುದ್ಧ ಘೋಷಣೆ ಕೂಗಿದ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ರಜನಿ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ವಾಹನಗಳನ್ನು ತಪಾಸಣೆ ನಡೆಸಿ ಬಿಡಲಾಯಿತು.

‘ರಜನಿಕಾಂತ್ ಕನ್ನಡಿಗ. ಕಾವೇರಿ ನದಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕವನ್ನು ಆಗ್ರಹಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಸಿದಾಗ ರಜನಿ ಅವರು ಮೌನ ವಹಿಸುತ್ತಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

‘ನಾನು ನಿಜವಾದ ತಮಿಳಿಗ. ನಾನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯವನು’ ಎಂದು ರಜನಿಕಾಂತ್ ಅವರು ಕಳೆದ ವಾರ ನೀಡಿದ್ದ ಹೇಳಿಕೆಗೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರಾಜಕೀಯ ಪ್ರವೇಶಿಸುವುದಾಗಿ ರಜನಿ ಅವರು ಸುಳಿವು ನೀಡಿದ್ದು,  ಇದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.