ADVERTISEMENT

ರಾಜಕೀಯ ಪ್ರವೇಶ: ಸಮಯ ಬಂದಾಗ ಮಾಹಿತಿ ಬಹಿರಂಗಪಡಿಸುವೆ ಎಂದ ರಜನೀಕಾಂತ್

ಏಜೆನ್ಸೀಸ್
Published 28 ಮೇ 2017, 4:51 IST
Last Updated 28 ಮೇ 2017, 4:51 IST
ರಜನೀಕಾಂತ್ (ಸಾಂದರ್ಭಿಕ ಚಿತ್ರ)
ರಜನೀಕಾಂತ್ (ಸಾಂದರ್ಭಿಕ ಚಿತ್ರ)   

ಚೆನ್ನೈ: ಖ್ಯಾತ ನಟ ರಜನೀಕಾಂತ್ ಅವರು ರಾಜಕೀಯ ಪ್ರವೇಶಿಸುವ ಬಗ್ಗೆ ಕಳೆದ ಕೆಲವು ದಿನಗಳಿಂದ ದೇಶದಾದ್ಯಂತ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಅವರೇ ಪ್ರತಿಕ್ರಿಯೆ ನೀಡಿದ್ದು, ರಾಜಕೀಯ ಪ್ರವೇಶಿಸುವ ಬಗ್ಗೆ ಸಮಯ ಬಂದಾಗ ಮಾಹಿತಿ ಬಹಿರಂಗಪಡಿಸುವೆ ಎಂದು ಹೇಳಿದ್ದಾರೆ.

ಅಭಿಮಾನಿಗಳ ಮತ್ತು ಹಿತೈಷಿಗಳ ಜತೆ ಚರ್ಚಿಸಿ ಶೀಘ್ರದಲ್ಲೇ ರಜನೀಕಾಂತ್ ಅವರು ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಲಿದ್ದಾರೆ ಎಂದು ಅವರ ಸಹೋದರ ಸತ್ಯನಾರಾಯಣ ರಾವ್ ಇತ್ತೀಚೆಗೆ ಹೇಳಿದ್ದರು. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಜನೀಕಾಂತ್, ಸಮಯ ಬಂದಾಗ ಮಾಹಿತಿ ನೀಡುವೆ ಎಂದು ತಿಳಿಸಿದ್ದಾರೆ ಎಂದು ಡಿಎನ್‌ಎ ವೆಬ್‌ಸೈಟ್ ವರದಿ ಮಾಡಿದೆ.

‘ಕಾಳ ಕರಿಕಾಳ’ ಸಿನಿಮಾದ ಶೂಟಿಂಗ್‌ಗೆಂದು ಮುಂಬೈಗೆ ತೆರಳಲು ಅನುವಾಗುತ್ತಿರುವ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ. ಹತ್ಯೆಗಾಗಿ ಜಾನುವಾರು ಮಾರಾಟ ನಿಷೇಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ತುಸು ಖಾರವಾಗಿಯೇ ಪ್ರತಿಕ್ರಿಯಿಸಿದ ಅವರು, ‘ನೀವು ನಿಮ್ಮ ಕೆಲಸ ಮಾಡಿ, ನನಗೆ ನನ್ನ ಕೆಲಸ ಮಾಡಲು ಬಿಡಿ’ ಎಂದು ಹೇಳಿದ್ದಲ್ಲದೆ, ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.