ನವದೆಹಲಿ: ಕೇರಳದ ಶ್ರೀ ಪದ್ಮನಾಭ ಸ್ವಾಮಿ ದೇವಾಲಯದ ಆಡಳಿತ ನಿರ್ವಹಣೆಗಾಗಿ ಸುಪ್ರೀಂಕೋರ್ಟ್್ ಗುರುವಾರ ರಚಿಸಿರುವ ಐವರು ಸದಸ್ಯರ ಸಮಿತಿಯಲ್ಲಿ ತಿರುವಾಂಕೂರು ರಾಜ ಮನೆತದವರು ಇಲ್ಲ ಎನ್ನುವುದು ದೇವಾಲಯದ ಇತಿಹಾಸದಲ್ಲಿಯೇ ಮಹತ್ವದ ಬೆಳವಣಿಗೆಯಾಗಿದೆ.
ತಿರುವನಂತಪುರದ ಜಿಲ್ಲಾ ನ್ಯಾಯಾಧೀಶರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ದೇವಸ್ಥಾನದ ತಂತ್ರಿ ಸೇರಿದಂತೆ ಇನ್ನೂ ಮೂರು ಜನ ಸಮಿತಿಯ ಸದಸ್ಯರಾಗಿರುತ್ತಾರೆ. ಇದಲ್ಲದೇ ಹಿರಿಯ ಐಎಎಸ್ ಅಧಿಕಾರಿ ಸತೀಶ್ ಕುಮಾರ್ ಅವರನ್ನು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿದೆ.
ದೇವಾಲಯದ ಆಡಳಿತ ನಿರ್ವಹಣೆಯಲ್ಲಿ ರಾಜಮನೆತನದವರು ಮೂಗು ತೂರಿಸದಂತೆ ನಿರ್ದೇಶನ ನೀಡಬೇಕೆಂದು ಕೋರಿ ನ್ಯಾಯಾಲಯದ ಸಹಾಯಕ ಗೋಪಾಲ ಸುಬ್ರಮಣಿಯಮ್್ ಕೋರ್ಟ್ಗೆ ಮನವಿ ಸಲ್ಲಿಸಿದ್ದರು.
ರಾಜಮನೆತನದ ಮನೆ ದೇವರು: 18ನೇ ಶತಮಾನದಿಂದಲೂ ಶ್ರೀ ಪದ್ಮನಾಭ ಸ್ವಾಮಿ ತಿರುವಾಂಕೂರು ರಾಜಮನೆತನದ ಮನೆ ದೇವರು. 1947ರಲ್ಲಿ ಅರಸೊತ್ತಿಗೆ ಅಂತ್ಯಗೊಂಡಾಗ ತಿರುವಾಂಕೂರಿನ ಬಹುತೇಕ ದೇಗುಲಗಳು ದೇವಸ್ಥಾನ ಮಂಡಳಿಗಳ ಸುಪರ್ದಿಗೆ ಬಂದವು.
ಆದರೆ ಪದ್ಮನಾಭಸ್ವಾಮಿ ದೇವಾಲಯದ ಆಡಳಿತ ನಿರ್ವಹಣೆಯನ್ನು ಮಾತ್ರ ರಾಜಮನೆತನಕ್ಕೆ ಬಿಟ್ಟುಕೊಡಲಾಯಿತು. ಅಲ್ಲಿಂದ ಮುಂದೆ ಕೇರಳದ ಚುನಾಯಿತ ಸರ್ಕಾರಗಳು ದೇವಾಲಯ ಅಥವಾ ನೆಲಮಾಳಿಗೆಯಲ್ಲಿನ ಅಪಾರ ಸಂಪತ್ತಿನ ಬಗ್ಗೆ ಅಷ್ಟೇನು ತಲೆ ಕೆಡಿಸಿಕೊಳ್ಳಲಿಲ್ಲ. ಹಳೆ ತಲೆಮಾರಿನವರು ಇಲ್ಲಿನ ನೆಲಮಾಳಿಗೆಯಲ್ಲಿರುವ ‘ಮಹಾ ನಿಧಿ’ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರೂ ಸಾರ್ವಜನಿಕರು ಮಾತ್ರ ಇದನ್ನು ನಂಬುತ್ತಿರಲಿಲ್ಲ.
ಲೆಕ್ಕಪರಿಶೋಧನೆ ಕಷ್ಟದ ಕೆಲಸ
ಶ್ರೀ ಪದ್ಮನಾಭ ಸ್ವಾಮಿ ದೇವಾಲಯದ ವಿಶೇಷ ಲೆಕ್ಕಪರಿಶೋಧನೆಯ ಉಸ್ತುವಾರಿ ವಹಿಸಿಕೊಳ್ಳುವಂತೆ ಸುಪ್ರೀಂಕೋರ್ಟ್್ ನೀಡಿರುವ ಆದೇಶವನ್ನು ಗೌರವಿಸುತ್ತೇನೆ. ಇದೊಂದು ಕಷ್ಟದ ಕೆಲಸವಾಗಿದ್ದು, ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ನಿವೃತ್ತ ಮಹಾಲೇಖಪಾಲ ವಿನೋದ್ ರಾಯ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.