ಲಖನೌ: ವಿದ್ಯಾರ್ಥಿಗಳ ಗುಂಪೊಂದು ಇಬ್ಬರು ದಲಿತ ವಿದ್ಯಾರ್ಥಿಗಳ ಮೇಲೆ ಲಾಠಿಯಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಇಲ್ಲಿನ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದ ಕ್ಯಾಂಪಸ್ನ ಹೊರವಲಯದಲ್ಲಿ ನಡೆದಿದೆ. ಹಲ್ಲೆಗೊಳಗಾದ ದಲಿತ ವಿದ್ಯಾರ್ಥಿಗಳನ್ನು ಶ್ರೇಯತ್ ಬೌದ್ಧ್ ಮತ್ತು ಅಶ್ವಿನಿ ರಂಜನ್ ಎಂದು ಗುರುತಿಸಲಾಗಿದೆ.
ಕ್ಯಾಂಪಸ್ನಿಂದ ಹೊರಗೆ ನಡೆದುಕೊಂಡು ಹೋಗುತ್ತಿದ್ದಾಗ ವಿಶ್ವವಿದ್ಯಾಲಯದ ಇತರ ವಿದ್ಯಾರ್ಥಿಗಳು ನಮ್ಮನ್ನು ತಡೆದು ಲಾಠಿಯಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಪ್ರಾಣಿ ವಿಜ್ಞಾನ ವಿಭಾಗದ ಮುಖ್ಯಸ್ಥ, ಪ್ರಾಧ್ಯಾಪಕ ಕಮಲ್ ಜೈಸ್ವಾಲ್ ವಿರುದ್ಧ ಮಾತನಾಡಬಾರದು ಎಂಬುದಾಗಿ ತಾಕೀತು ಮಾಡಿದ್ದಾರೆ ಎಂದು ಬೌದ್ಧ್ ತಿಳಿಸಿರುವುದಾಗಿ ನ್ಯೂಸ್ ಲಾಂಡ್ರಿ ವೆಬ್ಸೈಟ್ ವರದಿ ಮಾಡಿದೆ.
‘ಆ ಪ್ರಾಧ್ಯಾಪಕರು ದಲಿತ ವಿರೋಧಿ ಮನಸ್ಥಿತಿಯವರು. ತರಗತಿ ವೇಳೆಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ಮಾತನಾಡುತ್ತಿದ್ದರು. ನಾವು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದೆವು’ ಎಂದು ಬೌದ್ಧ್ ತಿಳಿಸಿದ್ದಾರೆ.
ಹಲ್ಲೆಕೋರರಿಂದ ತಪ್ಪಿಸಿಕೊಂಡ ದಲಿತ ವಿದ್ಯಾರ್ಥಿಗಳು ನಂತರ ಅಶಿಯಾನಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಾಧ್ಯಾಪಕ ಕಮಲ್ ಜೈಸ್ವಾಲ್, ಉಪೇಂದ್ರ ಸಿಂಗ್ ಥೆಕೆದಾರ್, ಶಶಾಂಕ್ ತಿವಾರಿ, ರಿಷಿ ಶುಕ್ಲಾ ಸೇರಿದಂತೆ 25 ಮಂದಿ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.