ನವದೆಹಲಿ: ‘ಲವ್ ಜಿಹಾದ್’ ಪ್ರಕರಣವೊಂದಕ್ಕೆ ಸಂಬಂಧಿಸಿದ ವಿಚಾರಣೆಯನ್ನು ತುರ್ತಾಗಿ ನ್ಯಾಯಮೂರ್ತಿಗಳ ಕೊಠಡಿಯಲ್ಲಿ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಕೇರಳ ಮೂಲದ ಮಹಿಳೆಯೊಬ್ಬರ ತಂದೆ ಈ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
’ನವೆಂಬರ್ 27ರಂದು ವಿಚಾರಣೆ ನಡೆಸಲಾಗುವುದು ಮತ್ತು ಮಹಿಳೆಯನ್ನು ಅದೇ ದಿನ ಬಹಿರಂಗ ವಿಚಾರಣೆಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ಸೂಚಿಸಿದೆ.
ಮಹಿಳೆಯ ತಂದೆ ಪರ ವಾದ ಮಂಡಿಸಿದ ವಕೀಲ ಕೆ.ಎಂ.ಅಶೋಕನ್, ’ಬಹಿರಂಗ ವಿಚಾರಣೆಯನ್ನು ಬದಲಾವಣೆ ಮಾಡದಿದ್ದರೆ ಯಾವುದೇ ರೀತಿ ಪ್ರಯೋಜನವಿಲ್ಲ. ಇದೊಂದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ನ್ಯಾಯಾಲಯದಲ್ಲಿ ಬಹಿರಂಗ ವಿಚಾರಣೆ ಸಲ್ಲದು. ಕೆಲವು ಸಂಘಟನೆಗಳಿಂದ ತಂದೆ ಮತ್ತು ಮಗಳ ಸುರಕ್ಷತೆಯೂ ಅಪಾಯದಲ್ಲಿ ಸಿಲುಕುವ ಸಾಧ್ಯತೆ ಇದೆ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಪ್ರಕರಣದ ಹಿನ್ನೆಲೆ
ಮದುವೆಯಾಗುವ ಮುನ್ನ ಹಿಂದೂ ಮಹಿಳೆಯೊಬ್ಬರು ಇಸ್ಲಾಂಗೆ ಮತಾಂತರಗೊಂಡಿದ್ದರು. ಶಫೀನ್ ಜಹಾನ್ ಎನ್ನುವವರನ್ನು ಮದುವೆಯಾಗಿದ್ದ ಮಹಿಳೆಯನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆ ಸಿರಿಯಾದಲ್ಲಿ ಉಗ್ರಗಾಮಿ ಚಟುವಟಿಕೆಗೆ ನೇಮಿಸಿಕೊಳ್ಳಲಾಗಿತ್ತು ಎಂದು ಆರೋಪಿಸಲಾಗಿತ್ತು. ಈ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸಿತ್ತು. ಕೇರಳದಲ್ಲಿ ವ್ಯವಸ್ಥಿತವಾಗಿ ಈ ರೀತಿಯ ಮದುವೆಗಳು ನಡೆಯುತ್ತಿವೆ. ಸುಮಾರು 89 ಪ್ರಕರಣಗಳು ವರದಿಯಾಗಿವೆ ಎಂದು ಎನ್ಐಎ ತಿಳಿಸಿತ್ತು. ಮಹಿಳೆಯ ಪತಿ ಜಹಾನ್ ಐಎಸ್ ಸಂಘಟನೆಗೆ ನೇಮಕ ಮಾಡಿಕೊಳ್ಳುವವರ ಜತೆ ಸಂಪರ್ಕ ಹೊಂದಿದ್ದ ಎಂದು ಮಹಿಳೆಯ ತಂದೆ ಸಹ ಆರೋಪಿಸಿದ್ದರು.
‘ಲವ್ ಜಿಹಾದ್’ ಎನ್ನಲಾದ ಈ ಪ್ರಕರಣ ಬಗ್ಗೆ ತನಿಖೆ ನಡೆಸುವಂತೆ ಎನ್ಐಎಗೆ ನೀಡಿದ್ದ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಕೋರಿ ಜಹಾನ್ ಸುಪ್ರೀಂಕೋರ್ಟ್ಗೆ ಸೆಪ್ಟೆಂಬರ್ 20ರಂದು ಅರ್ಜಿ ಸಲ್ಲಿಸಿದ್ದರು. ಕೇರಳ ಹೈಕೋರ್ಟ್ ಜಹಾನ್ ಮದುವೆಯನ್ನು ರದ್ದುಪಡಿಸಿದ ಬಳಿಕ ಸುಪ್ರೀಂಕೋರ್ಟ್ಗೆ ಅವರು ಅರ್ಜಿ ಸಲ್ಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.