ನವದೆಹಲಿ: ವರದಕ್ಷಿಣೆ ಕಿರುಕುಳ ಆರೋಪದ ಪ್ರಕರಣಗಳಲ್ಲಿ ದೌರ್ಜನ್ಯಕ್ಕೆ ಒಳಗಾಗುವ ಜನರಿಗೆ ನಿರಾಳವಾಗುವಂತಹ ಮಹತ್ವದ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ನೀಡಿದೆ.
ಮಹಿಳೆಯರು ನೀಡಿದ ದೂರನ್ನು ನಾಗರಿಕ ಸಮಾಜದ ಸದಸ್ಯರು ಇರುವ ಸಮಿತಿ ಪರಿಶೀಲಿಸದೆ ಯಾರನ್ನೂ ಬಂಧಿಸಬಾರದು ಎಂದು ಕೋರ್ಟ್ ಹೇಳಿದೆ. ದೂರುಗಳ ಪರಿಶೀಲನೆಗಾಗಿ ಪ್ರತಿ ಜಿಲ್ಲೆಯಲ್ಲಿಯೂ ಸಮಿತಿಯನ್ನು ರಚಿಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ಸಮಿತಿಯಲ್ಲಿ ನಾಗರಿಕ ಸಮಾಜದ ಸದಸ್ಯರು, ಅಧಿಕಾರಿಗಳ ಪತ್ನಿಯರು, ನಿವೃತ್ತ ಅಧಿಕಾರಿಗಳು ಮತ್ತು ಕಾನೂನು ಸ್ವಯಂ ಸೇವಕರು ಇರಬೇಕು ಎಂದು ತಿಳಿಸಿದೆ.
ದೂರನ್ನು ಪರಿಶೀಲಿಸಿ ಈ ಸಮಿತಿ ವರದಿ ನೀಡುವುದಕ್ಕೆ ಮೊದಲು ಯಾರನ್ನೂ ಬಂಧಿಸುವಂತಿಲ್ಲ. ಗಂಡ ಅಥವಾ ಆತನ ಮನೆಯವರ ಕೈಯಲ್ಲಿ ಹಿಂಸೆ ಅನುಭವಿಸುವ ಮಹಿಳೆಗೆ ರಕ್ಷಣೆ ನೀಡುವುದು ಭಾರತೀಯ ದಂಡ ಸಂಹಿತೆಯ 498 ಎ ಸೆಕ್ಷನ್ನ ಉದ್ದೇಶ. ಆದರೆ ಪ್ರಕರಣದಲ್ಲಿ ಮನೆಯವರೆಲ್ಲರನ್ನೂ ಬಂಧಿಸಿದರೆ ರಾಜಿ ಸಂಧಾನದ ಮಾರ್ಗವೇ ಮುಚ್ಚಿ ಹೋಗುತ್ತದೆ ಎಂದು ಪೀಠ ಹೇಳಿದೆ.
‘ಅನಗತ್ಯ ಬಂಧನ ಅಥವಾ ಒರಟು ವಿಚಾರಣೆಯಿಂದ ರಕ್ಷಣೆ ಒದಗಿಸಲು ನ್ಯಾಯಾಲಯವು ಈ ಕ್ರಮ ಕೈಗೊಂಡಿದೆ’ ಎಂದು ಪೀಠ ಹೇಳಿದೆ. ವರದಕ್ಷಿಣೆ ದೌರ್ಜನ್ಯ ತಡೆ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಈ ನಿರ್ದೇಶನ ನೀಡಲಾಗಿದೆ.ಹೊಸ ವ್ಯವಸ್ಥೆ ಬಗ್ಗೆ ಮುಂದಿನ ಮಾರ್ಚ್ 31ರೊಳಗೆ ವರದಿ ಸಲ್ಲಿಸಬೇಕು ಎಂದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪೀಠ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.