ADVERTISEMENT

ವರನ ದಿಬ್ಬಣವನ್ನು ಸ್ವಾಗತಿಸಲು ವಾದ್ಯ ತಂಡ ಕರೆಸಿದ್ದ ದಲಿತನ ಮನೆಯ ಬಾವಿಗೆ ಸೀಮೆ ಎಣ್ಣೆ ಸುರಿದರು!

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2017, 5:27 IST
Last Updated 30 ಏಪ್ರಿಲ್ 2017, 5:27 IST
ಸಾಂದರ್ಭಿಕ ಚಿತ್ರ  (ಕೃಪೆ: ರಾಯಿಟರ್ಸ್)
ಸಾಂದರ್ಭಿಕ ಚಿತ್ರ (ಕೃಪೆ: ರಾಯಿಟರ್ಸ್)   

ಅಗರ್ ಮಾಲ್ವಾ (ಮಧ್ಯಪ್ರದೇಶ): ದಲಿತನೊಬ್ಬ ತನ್ನ ಮಗಳ ಮದುವೆಯಲ್ಲಿ ವರನ ದಿಬ್ಬಣವನ್ನು ಸ್ವಾಗತಿಸಲು ವಾದ್ಯ ತಂಡ ಕರೆಸಿದ್ದಕ್ಕೆ ಕುಪಿತಗೊಂಡ ಮೇಲ್ಜಾತಿಯವರು ಆ ದಲಿತನ ಮನೆಯ ಬಾವಿಗೆ ಸೀಮೆ ಎಣ್ಣೆ ಸುರಿದ ಘಟನೆ ವರದಿಯಾಗಿದೆ.

ಇಲ್ಲಿನ ಅಗರ್‍ ಮಾಲ್ವಾ ಜಿಲ್ಲೆಯ ಮನಾ ಗ್ರಾಮದಲ್ಲಿ ಈ ಘಟನೆ ನಡೆದಿರುವುದಾಗಿ ದ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಬಾವಿಗೆ ಸೀಮೆ ಎಣ್ಣೆ ಸುರಿದ ಕಾರಣ ಅಲ್ಲಿನ ನೀರು ಬಳಕೆಗೆ ಯೋಗ್ಯವಾಗಿಲ್ಲ. ಹಾಗಾಗಿ ಆ ಊರಿನ ದಲಿತರು ಕಾಳಿಸಿಂಧ್ ನದಿ ದಡದಲ್ಲಿ ಹೊಂಡಗಳನ್ನು ತೋಡಿ ನೀರು ತೆಗೆಯುತ್ತಿದ್ದಾರೆ. ಅದೇ ವೇಳೆ ಸೀಮೆ ಎಣ್ಣೆ ಮಿಶ್ರಿತ ನೀರನ್ನು ಬಾವಿಯಿಂದ ತೆಗೆಯುವ ಕಾರ್ಯವನ್ನೂ ಮಾಡಿದ್ದಾರೆ.

ADVERTISEMENT

ಈ ಊರಿನಲ್ಲಿರುವ ದಲಿತ ಮತ್ತು  ಮೇಲ್ಜಾತಿಯವರ ನಡುವಿನ ತಾರತಮ್ಯವನ್ನು ಹೋಗಲಾಡಿಸಲು ಸರ್ಕಾರಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಶನಿವಾರ ಈ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಿವಿ ಸಿಂಗ್ ಮತ್ತು ಪೊಲೀಸ್ ಅಧಿಕಾರಿ ಆರ್ ಎಸ್ ಮೀನಾ ಅವರು ದಲಿತರು ಬಳಸುತ್ತಿರುವ ಬಾವಿಯಿಂದಲೇ ನೀರು ಸೇವಿಸಿ, ಅಲ್ಲಿನ ಮೇಲ್ಜಾತಿಯವರೊಂದಿಗೆ ಮಾತುಕತೆ ನಡೆಸಿ ಜಾತಿ ಭೇದವನ್ನು ನಿಲ್ಲಿಸುವಂತೆ ಕೋರಿದ್ದರು.

ಆದಾಗ್ಯೂ, ದಲಿತರಿಗೆ ನೀರು ಪೂರೈಕೆ ಮಾಡುವ ಸಲುವಾಗಿ ಆ ಪ್ರದೇಶದಲ್ಲಿ ಎರಡು ಕೊಳವೆ ಬಾವಿಗಳನ್ನು  ಕೊರೆಸಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.