ವಾರಾಣಸಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ಸ್ವಕ್ಷೇತ್ರ ವಾರಾಣಸಿಗೆ ಎರಡು ದಿನಗಳ ಕಾಲ ಭೇಟಿ ನೀಡುವ ಸಾಧ್ಯತೆಗಳಿದ್ದು, ಸಂಸದರ ಆದರ್ಶ ಗ್ರಾಮ ಯೋಜನೆಯಡಿ ತಮ್ಮ ಕ್ಷೇತ್ರದ ಒಂದು ಹಳ್ಳಿಯನ್ನು ಆಯ್ದುಕೊಳ್ಳುವ ಬಗ್ಗೆ ಚರ್ಚಿಸಲಿದ್ದಾರೆ. ಜತೆಗೆ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.
‘ಪ್ರಧಾನಿ ಅವರು ನವೆಂಬರ್ 7 ಹಾಗೂ 8 ರಂದು ವಾರಾಣಸಿಗೆ ಭೇಟಿ ನೀಡುವ ಸಾಧ್ಯತೆಗಳಿವೆ. ಮೋದಿ ಭೇಟಿ ಹಿನ್ನೆಲೆ ಜಿಲ್ಲಾಡಳಿತದಿಂದ ಎಲ್ಲಾ ಅಗತ್ಯ ಯೋಜನೆಗಳು ಹಾಗೂ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾ ಮಾಜಿಸ್ಟ್ರೇಟ್ ಓಂ ಪ್ರಕಾಶ್ ಚೌಬೆ ಅವರು ಗುರುವಾರ ತಿಳಿಸಿದ್ದಾರೆ.
ಅಲ್ಲದೆ, ಈ ಸಂಬಂಧ ಪ್ರಧಾನಿ ಕಾರ್ಯಾಲಯದಿಂದ ಬುಧವಾರ ರಾತ್ರಿ ಪತ್ರವೊಂದು ಬಂದಿದೆ ಎಂದೂ ಅವರು ತಿಳಿಸಿದ್ದಾರೆ.
‘ಪ್ರಧಾನಿ ಭೇಟಿಯ ಬಗ್ಗೆ ವಿಸ್ತೃತ ಮಾಹಿತಿ ಇನ್ನೂ ದೊರೆತಿಲ್ಲ. ಅದಕ್ಕಾಗಿ ಎದುರು ನೋಡುತ್ತಿದ್ದೇವೆ’ ಎಂದು ಚೌಬೆ ಹೇಳಿದ್ದಾರೆ.
‘ಭೇಟಿಯ ವೇಳೆ ಪ್ರಧಾನಿ ಅವರು ಬನಾರಸ್ ಹಿಂದು ವಿವಿಯ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಸಂಸದರ ಆದರ್ಶ ಗ್ರಾಮ ಯೋಜನೆಯ ಅಡಿಯಲ್ಲಿ ತಮ್ಮ ಕ್ಷೇತ್ರದ ಒಂದು ಹಳ್ಳಿಯ ಬಗ್ಗೆ ಅವರು ‘ಚರ್ಚಿಸಬಹುದು ಮತ್ತು ಆಯ್ದುಕೊಳ್ಳಬಹುದು’ ಎಂದಿದ್ದಾರೆ.
ಇನ್ನು, ‘ಇದಲ್ಲದೇ ಇನ್ನಿತರ ಸಮಾರಂಭಗಳಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ’ ಎಂದು ವಾರಾಣಸಿಯ ಮಾಧ್ಯಮ ಉಸ್ತುವಾರಿ ಸಂಜಯ್ ಭಾರದ್ವಾಜ್ ಹೇಳಿದ್ದಾರೆ.
ಅಕ್ಟೋಬರ್ 14 ಮತ್ತು 15ರಂದು ಪ್ರಧಾನಿ ಅವರ ವಾರಾಣಸಿಗೆ ಭೇಟಿ ನಿಗದಿಯಾಗಿತ್ತು. ಆದರೆ ಹುದ್ಹುದ್ ಚಂಡಮಾರುತದ ಪರಿಣಾಮ ಅವರು ತಮ್ಮ ಪ್ರವಾಸವನ್ನು ಮುಂದೂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.