ADVERTISEMENT

ವಿದ್ಯಾರ್ಥಿವೇತನಕ್ಕೆ ಆಧಾರ್‌ ಕಡ್ಡಾಯ: ಯುಜಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST

ನವದೆಹಲಿ: ವಿದ್ಯಾರ್ಥಿ ವೇತನ ಮತ್ತು ಉನ್ನತ ಶಿಕ್ಷ ಫೆಲೊಶಿಪ್‌ ಪಡೆಯಲು ವಿದ್ಯಾರ್ಥಿಗಳು ಆಧಾರ್‌ ಸಂಖ್ಯೆ ಸಲ್ಲಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ (ಎಚ್‌ಆರ್‌ಡಿ) ಸೂಚನೆಯಂತೆ, ವಿವಿಧ ಯೋಜನೆಗಳ ಅಡಿಯಲ್ಲಿ ವಿದ್ಯಾರ್ಥಿವೇತನ ಅಥವಾ ಫೆಲೊಶಿಪ್‌ಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳ ಆಧಾರ್‌ ಸಂಖ್ಯೆಯನ್ನು ಸಂಗ್ರಹಿಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಎಲ್ಲ ವಿಶ್ವವಿದ್ಯಾಲಯಗಳಿಗೆ ನಿರ್ದೇಶಿಸಿದೆ.

ಅಲ್ಲದೆ, ತನ್ನ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವಂತೆಯೂ ಅದು ವಿ.ವಿ.ಗಳ ಕುಲಪತಿಗಳಿಗೆ ಸೂಚಿಸಿದೆ. ಈ ಸಂಬಂಧ ಜೂನ್‌ 10ರಂದು ಯುಜಿಸಿಗೆ ಪತ್ರ ಬರೆದಿರುವ ಎಚ್‌.ಆರ್‌.ಡಿ., 2016–17ನೇ ಹಣಕಾಸು ವರ್ಷದಿಂದ ಜಾರಿಗೆ ಬರುವಂತೆ ಸರ್ಕಾರದ ಎಲ್ಲ ಸಬ್ಸಿಡಿಗಳು, ವಿದ್ಯಾರ್ಥಿವೇತನ ಮತ್ತು ಫೆಲೊಶಿಪ್‌ಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲು ಆಧಾರ್‌ ಸಂಖ್ಯೆಯನ್ನು ಕಡ್ಡಾಯ ಮಾಡುವಂತೆ ಸೂಚಿಸಿರುವುದಾಗಿ ಯುಜಿಸಿ ಕಾರ್ಯದರ್ಶಿ ಜಸ್ಪಾಲ್‌ ಎಸ್‌. ಸಂಧು ಅವರು ಕುಲಪತಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಆಧಾರ್‌ನಿಂದ ಅರ್ಹ ಫಲಾನುಭವಿಗಳಿಗೆ ನೇರವಾಗಿ ಸಬ್ಸಿಡಿ ವರ್ಗಾವಣೆಯಾಗುವ ಮಸೂದೆಗೆ ಮಾರ್ಚ್‌ ತಿಂಗಳಿನಲ್ಲಿ ಸಂಸತ್‌ ಒಪ್ಪಿಗೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.