ADVERTISEMENT

ವಿಮಾನ ದುರಂತದಲ್ಲೇ ನೇತಾಜಿ ಸಾವು

1995ರ ಸಂಪುಟದ ಟಿಪ್ಪಣಿ: ರಹಸ್ಯ ಕಡತಗಳಿಂದ ಬಹಿರಂಗ

​ಪ್ರಜಾವಾಣಿ ವಾರ್ತೆ
Published 23 ಜನವರಿ 2016, 20:24 IST
Last Updated 23 ಜನವರಿ 2016, 20:24 IST
ವಿಮಾನ ದುರಂತದಲ್ಲೇ ನೇತಾಜಿ ಸಾವು
ವಿಮಾನ ದುರಂತದಲ್ಲೇ ನೇತಾಜಿ ಸಾವು   

ನವದೆಹಲಿ (ಪಿಟಿಐ): ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ಕಣ್ಮರೆಗೆ ಸಂಬಂಧಪಟ್ಟ 100 ರಹಸ್ಯ ದಾಖಲೆಗಳ ಡಿಜಿಟಿಲ್‌ ರೂಪವನ್ನು ಕೇಂದ್ರ ಸರ್ಕಾರ ಶನಿವಾರ ಬಿಡುಗಡೆ ಮಾಡಿದೆ.

1945ರ ಅಗಸ್ಟ್‌ 18ರಂದು ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಮೃತಪಟ್ಟಿದ್ದಾರೆ ಎಂದು 1995ರಲ್ಲಿ ಕೇಂದ್ರ ಸಚಿವ ಸಂಪುಟದ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ಇದರಲ್ಲಿ ಬಹಿರಂಗವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ ಈ ಕಡತಗಳನ್ನು ದೆಹಲಿಯ ರಾಷ್ಟ್ರೀಯ ಪತ್ರಾಗಾರದಲ್ಲಿ ಇನ್ನು ಸಾರ್ವಜನಿಕರೂ ನೋಡಬಹುದಾಗಿದೆ.

1995ರ ಫೆ.6ರಂದು ಗೃಹ ಕಾರ್ಯದರ್ಶಿ ಕೆ. ಪದ್ಮನಾಭಯ್ಯ ಅವರು ಸಹಿ ಮಾಡಿದ ಸಂಪುಟದ ಟಿಪ್ಪಣಿಯಲ್ಲಿ, ‘ವಿಮಾನ ಅಪಘಾತದಲ್ಲಿ ಸುಭಾಷ್‌ ಚಂದ್ರ ಬೋಸ್‌ ಮೃತಪಟ್ಟಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇಂದ್ರ ಸರ್ಕಾರ ಈಗಾಗಲೇ ಈ ಅಭಿಪ್ರಾಯವನ್ನು ಒಪ್ಪಿಕೊಂಡಿದೆ’ ಎಂದು ಉಲ್ಲೇಖಿಸಲಾಗಿದೆ.

ಜಪಾನ್‌ನಿಂದ ಭಾರತಕ್ಕೆ ನೇತಾಜಿ ಅವರ ಅಸ್ಥಿಯನ್ನು ತರುವ ಬಗ್ಗೆ ಕೇಂದ್ರದ ನಿಲುವು ತಿಳಿಸಲು ಈ ಟಿಪ್ಪಣಿ ತಯಾರಿಸಲಾಗಿತ್ತು.
1991ರಲ್ಲಿ ಅಧಿಕಾರದಲ್ಲಿದ್ದ ಚಂದ್ರಶೇಖರ್‌ ಅವರ ಸರ್ಕಾರ ಸಹ ವಿಮಾನ ಅಪಘಾತದಲ್ಲೇ ನೇತಾಜಿ ಮೃತಪಟ್ಟಿದ್ದಾರೆ  ಎಂದು ಅಭಿಪ್ರಾಯಪಟ್ಟಿತ್ತು ಎನ್ನುವುದು ಕಡತಗಳ ಮೂಲಕ ಬಹಿರಂಗಗೊಂಡಿದೆ.

ಬೋಸ್‌ ಅವರ ಸಾವಿನ ಕುರಿತು ತನಿಖೆ ನಡೆಸಲು ಮತ್ತೊಂದು ತನಿಖಾ ಆಯೋಗ ರಚಿಸದಿರಲು 1991ರ ಫೆ.27ರಂದು ಅಂದಿನ ಸರ್ಕಾರ ನಿರ್ಧರಿಸಿತ್ತು ಎಂದು ಉಲ್ಲೇಖಿಸಲಾಗಿದೆ.

‘ ತೈವಾನ್‌ನ ತೈಹೊಕುನಲ್ಲಿ 1945ರ ಆಗಸ್ಟ್‌18ರಂದು ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರು ಮೃತಪಟ್ಟಿದ್ದಾರೆ ಎನ್ನುವುದನ್ನು ಈಗಾಗಲೇ ಒಪ್ಪಿಕೊಳ್ಳಲಾಗಿದೆ. ಹೀಗಾಗಿ, ಮತ್ತೊಂದು ತನಿಖಾ ಆಯೋಗ ರಚಿಸುವುದರಿಂದ ಯಾವುದೇ ರೀತಿ ಉಪಯೋಗ ಇಲ್ಲ’ ಎಂದು ಗೃಹ ಸಚಿವಾಲಯ ತಿಳಿಸಿತ್ತು.

ಗೃಹ ಸಚಿವಾಲಯದ ಅಭಿಪ್ರಾಯವನ್ನು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಒಪ್ಪಿಕೊಂಡಿತ್ತು ಎಂದು ತಿಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.