ಮುಂಬೈ (ಪಿಟಿಐ): ಮೈತ್ರಿ ಪಕ್ಷದೊಂದಿಗಿನ ಭಿನ್ನಮತ ಬದಿಗಿರಿಸಿ, ನಾಲ್ಕು ವಾರಗಳಷ್ಟು ಹಳೆಯದಾದ ಮಹಾರಾಷ್ಟ್ರ ಸರ್ಕಾರ ಸೇರುವಂತೆ ಶಿವಸೇನಾದ ಮನವೊಲಿಕೆಗೆ ಮತ್ತೆ ಮಾತುಕತೆ ಆರಂಭಿಸುವುದಾಗಿ ಬಿಜೆಪಿ ಗುರುವಾರ ಪ್ರಕಟಿಸಿದೆ.
ಬಿಜೆಪಿ ನಾಯಕರಾದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಶುಕ್ರವಾರದಿಂದ ಶಿವಸೇನಾ ನಾಯಕರೊಡನೆ ಮಾತುಕತೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸುದ್ದಿಗಾರರಿಗೆ ತಿಳಿಸಿದರು.
‘ಶಿವಸೇನಾವು ಬಿಜೆಪಿ ನೇತೃತ್ವದ ಸರ್ಕಾರ ಸೇರಬೇಕು ಎಂಬುದು ಎರಡೂ ಪಕ್ಷಗಳ ಕಾರ್ಯಕರ್ತರ ನಿಲುವು ಮಾತ್ರವಲ್ಲದೆ, ಮಹಾರಾಷ್ಟ್ರ ಜನರ ಅಭಿಪ್ರಾಯವೂ ಆಗಿದೆ’ ಎಂದು ಹೇಳಿದರು.
‘ಇತ್ತೀಚಿನ ವಿಧಾನಸಭಾ ಚುನಾವಣೆಯನ್ನು ಎರಡೂ ಪಕ್ಷಗಳು ಪ್ರತ್ಯೇಕವಾಗಿ ಎದುರಿಸಿದರೂ, ಕಳೆದ 25 ವರ್ಷಗಳ ಕಾಲ ಜೊತೆಯಾಗಿ ಕೆಲಸ ಮಾಡಿವೆ. ಕೇಂದ್ರದಲ್ಲೂ ಬಿಜೆಪಿ ನೇತೃತ್ವ ಸರ್ಕಾರದಲ್ಲಿ ಶಿವಸೇನಾ ಪಾಲುದಾರ ಪಕ್ಷವಾಗಿದೆ’ ಎಂದು ಅವರು ನುಡಿದರು.
‘ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೊಡನೆ ಕಳೆದ ವಾರ ಮಾತನಾಡಿರುವೆ. ಮಾತುಕತೆ ಯಶಸ್ವಿಯಾಗುವ ವಿಶ್ವಾಸವಿದೆ. ಶಿವಸೇನಾವು ರಾಜ್ಯ ಸರ್ಕಾರವನ್ನು ಸೇರಬೇಕೆಂಬುದು ನಮ್ಮೆಲ್ಲರ ಇಚ್ಛೆ’ ಎಂದು ಫಡ್ನವೀಸ್ ಹೇಳಿದರು.
ವರದಿಗಳ ಪ್ರಕಾರ, ಅಲ್ಪ ಬಹುಮತದ ಫಡ್ನವೀಸ್ ಸರ್ಕಾರ ಡಿಸೆಂಬರ್ 8ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಿಸಲು ಬಯಸಿದೆ. ಈ ಕಾರಣ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮತ್ತು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಒಪ್ಪಂದವೊಂದಕ್ಕೆ ಬಂದಿದ್ದಾರೆ. ಇದರನ್ವಯ ರಾಜ್ಯ ಸರ್ಕಾರದಲ್ಲಿ ನಾಲ್ಕು ಸಂಪುಟ ದರ್ಜೆ ಸೇರಿದಂತೆ ಒಟ್ಟು 10 ಸಚಿವ ಸ್ಥಾನಗಳನ್ನು ಶಿವಸೇನಾ ಗಳಿಸಲಿದೆ. ಆದರೆ ಇದು ಇನ್ನೂ ದೃಢಪಟ್ಟಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.