ಮುಂಬೈ (ಪಿಟಿಐ): ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಾಯಿ ಇಂದ್ರಾಣಿ ಮುಖರ್ಜಿ, ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಹಾಗೂ ಕಾರು ಚಾಲಕ ಶ್ಯಾಮ್ ರಾಯ್ ಅವರುಗಳ ಪೊಲೀಸ್ ವಶದಲ್ಲಿರುವ ಅವಧಿಯನ್ನು ಸೆಪ್ಟೆಂಬರ್ 5ರ ವರೆಗೆ ವಿಸ್ತರಿಸಲಾಗಿದೆ.
ಈ ಮೂವರನ್ನೂ ಸೋಮವಾರ ಮಧ್ಯಾಹ್ನ 3ಕ್ಕೆ ಬಿಗಿ ಭದ್ರತೆಯಲ್ಲಿ ಇಲ್ಲಿನ ಮೆಟ್ರೊಪಾಲಿಟನ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಸಂಜೀವ್ ಖನ್ನಾ ಅವರ ಪಾಸ್ಪೋರ್ಟ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳನ್ನು ಪೊಲೀಸ್ ಕಸ್ಟಡಿಯಲ್ಲಿ ಇಡಬಾರದು, ನ್ಯಾಯಾಂಗ ವಶಕ್ಕೆ ಒಪ್ಪಿಸಬೇಕು ಎಂದು ಸಂಜೀವ್ ಖನ್ನಾ ಪರ ವಕೀಲರು ಆಗ್ರಹಿಸಿದ್ದಾರೆ. ಮುಂಬೈ ಪೊಲೀಸರು ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುತ್ತಿಲ್ಲ, ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಇಂದ್ರಾಣಿ ಮುಖರ್ಜಿ ಪರ ವಕೀಲರು ಹೇಳಿದ್ದಾರೆ.
ಸಂಜೀವ್ ಖನ್ನಾ ಮತ್ತು ಇಂದ್ರಾಣಿ ಮುಖರ್ಜಿಯ ಮಗಳು ‘ವಿಧಿ’ಯನ್ನು ಸೋಮವಾರ ನಡೆದ ಕೋರ್ಟ್ ವಿಚಾರಣೆಗೆ ಹಾಜರುಪಡಿಸಲಾಯಿತು. ಇಂದ್ರಾಣಿ ಮುಖರ್ಜಿಗೆ ಕೋರ್ಟ್ ರೂಂನಲ್ಲಿ ಮಗಳ ಜತೆಗೆ ಮಾತನಾಡಲು ಅವಕಾಶ ನೀಡಲಾಯಿತು.
ಮುಂಬೈ ಪೊಲೀಸರು ಈ ಮೂವರು ಆರೋಪಿಗಳನ್ನು ಭಾನುವಾರ ರಾಯಗಡ ಜಿಲ್ಲೆಯ ಪೆನ್ ತಾಲೂಕು ಅರಣ್ಯ ಪ್ರದೇಶಕ್ಕೆ ಕರೆದ್ಯೋದು ಶೀನಾಳ ಮೃತದೇಹದ ಅವಶೇಷಗಳು ಸಿಕ್ಕ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.