ಲಖನೌ: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಕ್ಕಾಗಿ ನಗದು ರಹಿತ ವ್ಯವಹಾರಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ, ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಮತ್ತು ಸುಧಾಮ ನಗದು ರಹಿತ ವ್ಯವಹಾರ ಮಾಡಿದ್ದರು ಎಂದಿದ್ದಾರೆ.
ಸುಧಾಮ ಶ್ರೀಕೃಷ್ಣನನ್ನು ಭೇಟಿ ಮಾಡಿ ಮರಳಿದಾಗ ಶ್ರೀಕೃಷ್ಣ ಸುಧಾಮನಿಗೆ ಹಣ ಕೊಡಲಿಲ್ಲ. ಅದರ ಬದಲು ಸುಧಾಮನ ಮನೆಯ ಪರಿಸ್ಥಿತಿಯನ್ನೇ ಬದಲಿಸಿ ಸ್ನೇಹ ಮೆರೆದಿದ್ದರು. 5,000 ವರ್ಷಗಳ ಹಿಂದೆಯೇ ಇದೆಲ್ಲಾ ಸಾಧ್ಯವಾಗಿದ್ದರೆ ಈಗಿನ ಕಾಲದಲ್ಲಿ ಯಾಕೆ ಸಾಧ್ಯವಿಲ್ಲ? ನಾವೆಲ್ಲರೂ ಇದರಿಂದ ಸ್ಫೂರ್ತಿ ಪಡೆದುಕೊಳ್ಳಬೇಕಿದೆ ಎಂದು ಆದಿತ್ಯನಾಥ ಹೇಳಿದ್ದಾರೆ.
ಸೋಮವಾರ ನಡೆದ ರಾಷ್ಟ್ರೀಯ ಪಂಚಾಯತಿ ರಾಜ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಆದಿತ್ಯನಾಥ್, ಯಾರಾದರೂ ಲಂಚ ಕೇಳಿದರೆ ಅವರಿಗೆ ಅವರ ಖಾತೆಗೆ ಫೋನ್ ಮೂಲಕ ಹಣ ವರ್ಗಾಯಿಸುವುದಾಗಿ ಹೇಳಿ. ಹಾಗೆ ಎಲ್ಲಿಯಾದರೂ ಆ ವ್ಯಕ್ತಿ ಹಣ ಸ್ವೀಕರಿಸಿದರೆ ಆತ ಖಂಡಿತಾ ಜೈಲು ಸೇರುತ್ತಾನೆ ಎಂದಿದ್ದಾರೆ.
ಏತನ್ಮಧ್ಯೆ, ವಿಐಪಿ ಸಂಸ್ಕೃತಿ ಎಂಬುದು ಪ್ರಜಾಪ್ರಭುತ್ವವನ್ನು ತಮಾಷೆ ಮಾಡಿದಂತೆ. ಜನರ ಅಭಿವೃದ್ಧಿಯೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ನಿಜವಾದ ವಿಐಪಿ ಸಂಸ್ಕೃತಿ ಎಂದು ಆದಿತ್ಯನಾಥ ಅಭಿಪ್ರಾಯ ಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.