ನವದೆಹಲಿ (ಪಿಟಿಐ): ಬಿಜೆಪಿ ಮುಖಂಡ ನಿತಿನ್ ಗಡ್ಕರಿ ಮನೆಯಲ್ಲಿ ‘ಕದ್ದಾಲಿಕೆ ಸಾಧನ’ ಪತ್ತೆಯಾಗಿದೆ ಎನ್ನುವ ವರದಿಗೆ ಸಂಬಂಧಿಸಿ ಸಂಸತ್ನಲ್ಲಿ ಹೇಳಿಕೆ ನೀಡಬೇಕೆಂದು ಪ್ರತಿಪಕ್ಷಗಳು ಸರ್ಕಾರವನ್ನು ಒತ್ತಾಯಿಸಿವೆ.
ಇದು ಊಹಾಪೋಹದ ವರದಿ ಎಂದು ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದರೂ ಕಾಂಗ್ರೆಸ್್ ಹಾಗೂ ಇನ್ನಿತರ ವಿರೋಧ ಪಕ್ಷಗಳು ಸರ್ಕಾರದ ಹೇಳಿಕೆಗೆ ಪಟ್ಟು ಹಿಡಿದಿವೆ.
ತನಿಖೆಗೆ ಆಗ್ರಹ: ‘ಇದೊಂದು ಗಂಭೀರ ವಿಷಯ. ತನಿಖೆಗೆ ಒಳಪಡಿಸಬೇಕು’ ಎಂದು ಕಾಂಗ್ರೆಸ್್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಒತ್ತಾಯಿಸಿದ್ದಾರೆ.
‘ಸಂಪುಟದ ಪ್ರಮುಖ ವ್ಯಕ್ತಿಯ ಭದ್ರತೆಯ ಬಗ್ಗೆ ಇದು ಆತಂಕ ಮೂಡಿಸಿದೆ. ಒಂದು ವೇಳೆ ಇದು ನಿಜವೇ ಆಗಿದ್ದಲ್ಲಿ ಸಾಮಾನ್ಯ ಜನರನ್ನು ದೇವರೇ ಕಾಪಾಡಬೇಕು’ ಎಂದು ಹೇಳಿದ್ದಾರೆ.
ಅಮೆರಿಕದ ಮೇಲೆ ಸಂಶಯ: ಈ ಪ್ರಕರಣದ ಹಿಂದೆ ಅಮೆರಿಕದ ಚಿತಾವಣೆ ಇದೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಸುಬ್ರಮಣಿಯಂ ಸ್ವಾಮಿ, ‘ಬಿಜೆಪಿಯಂಥ ರಾಷ್ಟ್ರೀಯವಾದಿ ಪಕ್ಷಗಳು ಅಧಿಕಾರಕ್ಕೆ ಬರುವುದು ಅಮೆರಿಕಕ್ಕೆ ಬೇಕಿರಲಿಲ್ಲ’ ಎಂದಿದ್ದಾರೆ.
‘ಗಡ್ಕರಿ ಈ ವರದಿಯನ್ನು ಅಲ್ಲಗಳೆದಿದ್ದಾರೆ. ಆದರೂ ಈ ಬಗ್ಗೆ ಇತರರು ಹೇಳಿಕೆ ನೀಡುವುದು ಸೂಕ್ತವಲ್ಲ’ ಎಂದು ಗೃಹ ಖಾತೆ ರಾಜ್ಯ ಸಚಿವ ಕಿರಣ್್ ರಿಜಿಜು ಹೇಳಿದ್ದಾರೆ.
ಕದ್ದಾಲಿಕೆಯಂಥ ಪ್ರಕರಣಗಳಿಂದ ರಕ್ಷಿಸಿಕೊಳ್ಳುವುದಕ್ಕೆ ಕಾನೂನಿನಲ್ಲಿ ಇರುವ ಅವಕಾಶಗಳ ಬಗ್ಗೆ ಸರ್ಕಾರ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಕಾಂಗ್ರೆಸ್ ಮುಖಂಡ ಮನಿಷ್ ತಿವಾರಿ ಹೇಳಿದ್ದಾರೆ.
ಇದನ್ನು ವಿಸ್ತೃತ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾನುವಾರ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ಎನ್ಸಿಪಿ ಮುಖಂಡ ತಾರೀಕ್್ ಅನ್ವರ್, ‘ಕದ್ದಾಲಿಕೆಯನ್ನು ರುಜುವಾತುಪಡಿಸಲು ಸರ್ಕಾರ ಸದನದಲ್ಲಿ ಹೇಳಿಕೆ ಕೊಡಬೇಕು. ಈ ಪ್ರಕರಣದಲ್ಲಿ ಪ್ರಧಾನಿ ಕಚೇರಿ ಅಥವಾ ಹೊರಗಿನವರು ಶಾಮೀಲಾಗಿದ್ದಾರೆಯೇ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಅಮೆರಿಕದ ರಾಷ್ಟ್ರೀಯ ಭದ್ರತಾ ಪಡೆಯು ಬಿಜೆಪಿ ಮೇಲೆ ಗುಟ್ಟಾಗಿ ನಿಗಾ ಇಡುತ್ತಿರುವ ಬಗ್ಗೆ ಏನಾದರೂ ಮಾಹಿತಿ ಇದೆಯೇ ಎನ್ನುವ ಪ್ರಶ್ನೆಗೆ, ‘ ಅಮೆರಿಕವು ಬಿಜೆಪಿ ಜತೆ ಉತ್ತಮ ಸಂಬಂಧ ಹೊಂದಿದೆ’ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಮಾಜಿ ಸಚಿವ ಸಲ್ಮಾನ್್ ಖುರ್ಷಿದ್್ ಪ್ರತಿಕ್ರಿಯಿಸಿದ್ದಾರೆ.
‘ಇದರಲ್ಲಿ ಬೇರೆಯವರ ಕೈವಾಡ ಇರುವ ಶಂಕೆ ಇದ್ದಲ್ಲಿ ಬಿಜೆಪಿ ಅದನ್ನು ತನಿಖೆಗೆ ಒಳಪಡಿಸಬೇಕು’ ಎಂದೂ ಅವರು ಹೇಳಿದ್ದಾರೆ.
13, ತೀನ್್ ಮೂರ್ತಿ ಲೇನ್ನಲ್ಲಿರುವ ಗಡ್ಕರಿ ನಿವಾಸದ ಮಲಗುವ ಕೋಣೆಯಲ್ಲಿ ಅತ್ಯಾಧುನಿಕ ಆಲಿಕೆ ಸಾಧನ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಪ್ರತಿಕ್ರಿಯೆಗೆ ನಕಾರ: ಗೃಹ ಸಚಿವ ರಾಜನಾಥ್ ಸಿಂಗ್ ಅವರು ಈ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ‘ಗಡ್ಕರಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ ನಾವು ಹೇಳಬೇಕಾಗಿರುವುದು ಇನ್ನೇನೂ ಇಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
ಶಕ್ತಿಸಿನ್ಹ್ ಗೋಹಿಲ್ ಆಗ್ರಹ
ಮೋದಿ ಹಾಗೂ ಅಮಿತ್ ಷಾ ಅವರ ಆಣತಿ ಮೇರೆಗೆ ನಡೆದಿದೆ ಎನ್ನಲಾದ ಯುವತಿ ಮೇಲಿನ ಅಕ್ರಮ ನಿಗಾ ಪ್ರಕರಣ ಉಲ್ಲೇಖಿಸಿ ಗುಜರಾತ್ ಕಾಂಗ್ರೆಸ್ ನಾಯಕ ಶಕ್ತಿಸಿನ್ಹ್ ಗೋಹಿಲ್, ಗಡ್ಕರಿ ನಿವಾಸದಲ್ಲಿ ಕದ್ದಾಲಿಕೆ ಉಪಕರಣ ಪತ್ತೆಯಾಗಿರುವ ಕುರಿತು ಸರ್ಕಾರ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
‘ನಾನು ಗುಜರಾತ್ನಿಂದ ಬಂದಿದ್ದೇನೆ. ಅದು ಬೇಹುಗಾರಿಕೆಗೆ ಹೆಸರುವಾಸಿಯಾದ ಸ್ಥಳ. ಬೇಹುಗಾರಿಕೆಯ ಸೂತ್ರಧಾರರೇ ದೆಹಲಿಗೆ ಬಂದಂತಿದೆ’ ಎಂದು ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.