ADVERTISEMENT

ಸಿಪಿಎಂ–ಟಿಎಂಸಿ ನಡುವೆ ಮಾರಾಮಾರಿ

ರಾಷ್ಟ್ರವ್ಯಾಪಿ ಬಂದ್ ವೇಳೆ ಪಶ್ಚಿಮ ಬಂಗಾಳದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2015, 9:13 IST
Last Updated 2 ಸೆಪ್ಟೆಂಬರ್ 2015, 9:13 IST

ಬಹರಂಪುರ, ಪಶ್ಚಿಮ ಬಂಗಾಳ (ಪಿಟಿಐ): ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ದೇಶದಾದ್ಯಂತ ಬಂದ್‌ ವೇಳೆ ಎಡಪಕ್ಷ ಸಿಪಿಎಂ ಹಾಗೂ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.

ಮುರ್ಷಿದಾಬಾದ್‌ ಜಿಲ್ಲೆಯ ಬಹರಂಪುರ ಹಾಗೂ ಇತರ ಕೆಲವೆಡೆ ಸಿಪಿಎಂ ಹಾಗೂ ಟಿಎಂಸಿ ಕಾರ್ಯಕರ್ತರ ಮಧ್ಯೆ ಸಂಘರ್ಷ ನಡೆದಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಘಟನೆ ಸಂಬಂಧ ಸಿಪಿಎಂನ ಆರು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದೂ ಪೊಲೀಸರು ಹೇಳಿದ್ದಾರೆ.

ADVERTISEMENT

ಸಿಪಿಎಂ ಆರೋಪ: ಬಂದ್‌ ಹಿನ್ನೆಲೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ವೇಳೆ ತಮ್ಮ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಸಿಪಿಎಂ ಆರೋಪಿಸಿದೆ.

ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಟಿಎಂಸಿ ಕಾರ್ಯಕರ್ತರು ಇಟ್ಟಿಗೆ ಹಾಗೂ ದೊಣ್ಣೆ/ಲಾಠಿಗಳಿಂದ ಹಲ್ಲೆ ನಡೆಸಿದರು. ಘಟನೆಯಲ್ಲಿ ಮಾಜಿ ಸಂಸದ ಮೈನುಲ್ ಹಸನ್ ಸೇರಿದಂತೆ 15 ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಪಕ್ಷದ ಜಿಲ್ಲಾ ಸದಸ್ಯ ಸಚ್ಚಿದಾನಂದ ಕಂದಾರಿ ಆರೋಪಿಸಿದ್ದಾರೆ.

ಆರೋಪ ನಿರಾಕರಿಸಿದ ಟಿಎಂಸಿ: ಆದರೆ, ಸಿಪಿಎಂ ಆರೋಪವನ್ನು ಟಿಎಂಸಿಯ ಹಿರಿಯ ಮುಖಂಡ ಮನ್ನನ್‌ ಹೊಸೇನ್‌ ಅಲ್ಲಗಳೆದಿದ್ದಾರೆ. ಪಕ್ಷದ ಕಾರ್ಮಿಕ ಒಕ್ಕೂಟ ಕಚೇರಿಯಲ್ಲಿ ಕುಳಿತಿದ್ದಾಗ ಸಿಪಿಎಂ ಕಾರ್ಯಕರ್ತರೇ ಹಲ್ಲೆ ನಡೆಸಿದರು ಎಂದು ಪ್ರತ್ಯಾರೋಪ ಮಾಡಿದ್ದಾರೆ. ಅಲ್ಲದೇ, ಸಿಪಿಎಂ ಕಾರ್ಯಕರ್ತರು ತಮ್ಮ ಕಾರಿಗೆ ಹಾನಿಗೊಳಿಸಿದ್ದಾರೆ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.