ADVERTISEMENT

ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ

ಕಲ್ಲಿದ್ದಲು ನಿಕ್ಷೇಪ ಇ–ಹರಾಜು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 19:30 IST
Last Updated 21 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ-ಗಳನ್ನು ಇ–ಹರಾಜು ಪ್ರಕ್ರಿಯೆಯಲ್ಲಿ ಹಂಚಿಕೆ ಮಾಡುವ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಅಂಕಿತ ದೊರೆತಿದೆ.

ವಿದ್ಯುನ್ಮಾನ ಪ್ರಕ್ರಿಯೆ ಮೂಲಕ ಖಾಸಗಿ ಕಂಪೆನಿಗಳಿಗೆ ಕಲ್ಲಿದ್ದಲು ಗಣಿ-ಗಾರಿಕೆಗೆ ತೊಡಗಲು ಪಾರದರ್ಶಕವಾಗಿ ಅನುವು ಮಾಡುವುದಾಗಿ ಕೇಂದ್ರ ಹೇಳಿತ್ತು.

ಈ ವಲಯದಲ್ಲಿ ದೀರ್ಘಕಾಲದಿಂದ ಕಾದಿದ್ದ ‘ಸುಧಾರಣೆ’ಯನ್ನು ತರಲು ಅಸ್ತಿತ್ವದಲ್ಲಿರುವ ಪರಿಶೀಲನಾ ಸಮಿತಿ ಮೂಲಕ  ನಿಕ್ಷೇಪ ಹಂಚಿಕೆ ವಿಧಾನವನ್ನು ತೆಗೆದುಹಾಕಲು ಕೇಂದ್ರ ಮುಂದಾಗಿದ್ದು, ಅದಕ್ಕೆ ರಾಷ್ಟ್ರಪತಿಗಳ ಅನುಮೋದನೆ ದೊರೆತಿದೆ.

1993ರಿಂದ ಈಚೆಗೆ ಹಂಚಿಕೆ ಮಾಡಿರುವ 214 ಕಲ್ಲಿದ್ದಲು ನಿಕ್ಷೇಪ-ಗಳ ಹಂಚಿಕೆಯು ನಿಯಮಬಾಹಿರ ಎಂದು ಸುಪ್ರೀಂಕೋರ್ಟ್‌ ಅವುಗಳನ್ನು ರದ್ದುಗೊಳಿಸಿತ್ತು. ಹೀಗಾಗಿ ಆ ಜಾಗ-ಗಳನ್ನು ವಶಕ್ಕೆ ಪಡೆದುಕೊಂಡು ಇ–ಹರಾಜು ಪ್ರಕ್ರಿಯೆ ಮೂಲಕ ಹಂಚಿಕೆ ಮಾಡಲು ಸರ್ಕಾರ ಮುಂದಾಗಿದೆ.

ಸರ್ಕಾರದ ನಡೆಯನ್ನು ಕೈಗಾರಿಕಾ ಸಂಸ್ಥೆಗಳು  ಸ್ವಾಗತಿಸಿದ್ದು, ಇದು ಸೂಕ್ತ ಹೆಜ್ಜೆ ಎಂದು ಬಣ್ಣಿಸಿವೆ.
‘ಇದೊಂದು ಮಹತ್ವದ ನಿರ್ಧಾರ-ವಾಗಿದ್ದು, ಕಲ್ಲಿದ್ದಲು ವಲಯವನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರದ ಗಂಭೀರ ಆಲೋಚನೆಯನ್ನು ಪ್ರತಿಬಿಂಬಿ-ಸು-ತ್ತದೆ. ಈ ನಡೆಯ ಮೂಲಕ ಕಲ್ಲಿ-ದ್ದಲು ಪೂರೈಕೆಯಲ್ಲಿ ಉಂಟಾಗುತ್ತಿದ್ದ ಕೊರತೆಯ ಆತಂಕವನ್ನು ಸರ್ಕಾರ ಶಮನಗೊಳಿಸಿದೆ’ ಎಂದು ಎಫ್‌ಐಸಿಸಿಐ ಅಧ್ಯಕ್ಷ ಸಿದ್ಧಾರ್ಥ್ ಬಿರ್ಲಾ ಹೇಳಿದ್ದಾರೆ.

‘ಕಲ್ಲಿದ್ದಲು ನಿಕ್ಷೇಪದ ಸ್ಥಳಗಳಿಗೆ ವೈಮಾನಿಕ ಸಂಪರ್ಕ ಕಲ್ಪಿಸುವಲ್ಲಿದ್ದ ಅನಿಶ್ಚಿತತೆ ನಿವಾರಣೆಯಾಗಿದ್ದು, ರಸ್ತೆ ಸಂಪರ್ಕವೂ ಸುಗಮವಾಗಲಿದೆ. ಸರ್ಕಾರ ತೆಗೆದುಕೊಳ್ಳುತ್ತಿರುವ ತ್ವರಿತ ಕ್ರಮಗಳು ಸಮರ್ಪಕವಾಗಿವೆ ಎಂದು ಸಿಐಐ ಪ್ರಧಾನ ನಿರ್ದೇ-ಶಕ ಚಂದ್ರಜಿತ್ ಬ್ಯಾನರ್ಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.