ನವದೆಹಲಿ (ಪಿಟಿಐ): ಇರಾಕ್ನ ಗಲಭೆ ಪೀಡಿತ ಪ್ರದೇಶಗಳಲ್ಲಿದ್ದ 17ಕ್ಕೂ ಹೆಚ್ಚು ಭಾರತೀಯರನ್ನು ಸ್ಥಳೀಯ ಆಡಳಿತದ ನೆರವಿನಿಂದ ಬಾಗ್ದಾದ್ಗೆ ಸ್ಥಳಾಂತರಿಸಲಾಗಿದೆ. ಈವರೆಗೆ ಭಾರತ ಮೂಲದ 34 ಜನರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ.
‘ಸುರಕ್ಷತೆ ದೃಷ್ಟಿಯಿಂದ ಇರಾಕ್ ತೊರೆಯುವುದು ಒಳಿತು’ ಎಂದು ಭಾರತೀಯರಿಗೆ ಸಲಹೆ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
‘ಇರಾಕ್ನಲ್ಲಿರುವ ಭಾರತೀಯರ ಸುರಕ್ಷತೆಗೆ ಮೊದಲ ಆದ್ಯತೆ. ಆದ್ದರಿಂದ ಹಿಂಸಾಚಾರ ನಡೆಯುತ್ತಿರುವ ಪ್ರದೇಶದಲ್ಲಿರುವವರಿಗೆ ಹೊರಕ್ಕೆ ಬಾರದಂತೆ ಸೂಚಿಸಲಾಗಿದೆ’ ಎಂದು ವಿದೇಶಾಂಗ ಸಚಿವಾಲಯ ವಕ್ತಾರರು ಹೇಳಿದ್ದಾರೆ.
‘ಇರಾಕ್ ತೊರೆಯಲು ಬಯಸುವ ಭಾರತೀಯರಿಗೆ ನೆರವು ನೀಡಲು ಭಾರತದ ದೂತಾವಾಸದ ಅಧಿಕಾರಿಗಳು ಮತ್ತು ಇರಾಕ್ ಅಧಿಕಾರಿಗಳನ್ನು ಒಳಗೊಂಡ ಜಂಟಿ ಸಮಿತಿ ರಚಿಸಲಾಗುತ್ತಿದೆ’ ಎಂದೂ ವಕ್ತಾರರು ಹೇಳಿದ್ದಾರೆ.
‘ಸೇನೆ ನಿಯೋಜನೆ ಇಲ್ಲ’
ಇರಾಕ್ನ ಗಲಭೆಗ್ರಸ್ತ ಸ್ಥಳಗಳಲ್ಲಿರುವ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕಾಗಿ ದೇಶದ ಸೇನಾ ಪಡೆಯನ್ನು ನಿಯೋಜಿಸುವ ಇಚ್ಛೆ ಸರ್ಕಾರಕ್ಕೆ ಇಲ್ಲ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
‘ಈ ವಿಷಯದಲ್ಲಿ ನಾನು ಯಾವುದೇ ಊಹಾಪೋಹಗಳಿಗೆ ಆಸ್ಪದ ನೀಡುವುದಿಲ್ಲ’ ಎಂದು ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ವೆಚ್ಚ ಭರಿಸಲು ಸಿದ್ಧ
(ತಿರುವನಂತಪುರ ವರದಿ): ಇರಾಕ್ನಲ್ಲಿ ಘರ್ಷಣೆ ನಡೆಯುತ್ತಿರುವ ಸ್ಥಳಗಳಲ್ಲಿ ಸಿಲುಕಿಕೊಂಡಿರುವ ಕೇರಳ ಮೂಲದವರನ್ನು ರಾಜ್ಯಕ್ಕೆ ವಾಪಸು ಕರೆತರಲು ತಗಲುವ ವೆಚ್ಚ ಭರಿಸುವುದಾಗಿ ಕೇರಳ ಸರ್ಕಾರ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.