ನವದೆಹಲಿ: ಕೆಲವೊಂದು ಬಾರಿ ವಿಚಿತ್ರವಾದ ಅರ್ಜಿಗಳು ಸುಪ್ರೀಂಕೋರ್ಟ್ ಬಂದು ತಲುಪುವುದುಂಟು. ಇದೇ ರೀತಿಯ ಅರ್ಜಿಯೊಂದರ ವಿಚಾರಣೆಯನ್ನು ಶುಕ್ರವಾರ ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿತ್ತು. ಜಗತ್ತಿನ ಮಾರಕ ಜೀವಿಯಾದ ಸೊಳ್ಳೆಯನ್ನು ಭಾರತದಿಂದಲೇ ನಾಶ ಮಾಡಬೇಕು ಎಂದು ವ್ಯಕ್ತಿಯೊಬ್ಬರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಕೈಗೆತ್ತಿಕೊಂಡ ಇಬ್ಬರು ನ್ಯಾಯಾಧೀಶರ ನ್ಯಾಯಪೀಠವು ನಾವು ದೇವರಲ್ಲ, ದೇವರಿಂದ ಮಾತ್ರ ಮಾಡಲು ಸಾಧ್ಯವಾದ ಕೆಲಸವನ್ನು ನಮ್ಮಲ್ಲಿ ಮಾಡುವಂತೆ ಹೇಳಬೇಡಿ ಎಂದಿದ್ದಾರೆ. ಧನೇಶ್ ಲೆಶ್ಧನ್ ಎಂಬ ವ್ಯಕ್ತಿ ಈ ರೀತಿಯ ಅರ್ಜಿ ಸಲ್ಲಿಸಿದ್ದನು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸೊಳ್ಳೆಗಳು ಹರಡುವ ರೋಗಗಳಿಂದಾಗಿ ದೇಶದಲ್ಲಿ 7,25,00 ಜನರು ಸತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಿದ ಧನೇಶ್ ಲೆಶ್ಧನ್, ಸೊಳ್ಳೆಗಳನ್ನು ನಿಯಂತ್ರಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರಾದ ಮದನ್ ಬಿ ಲೋಕುರ್ ಮತ್ತು ದೀಪಕ್ ಗುಪ್ತಾ, ಸೊಳ್ಳೆಗಳನ್ನು ಕೊಲ್ಲಲು ಅಧಿಕಾರಿಗಳಿಗೆ ಆದೇಶಿಸುವ ಮೂಲಕ ಸೊಳ್ಳೆ ಸಂತತಿಯ ನಿರ್ಮೂಲನೆ ಆಗುತ್ತದೆ ಎಂದು ನಾವು ನಂಬುವುದಿಲ್ಲ. ಪ್ರತಿಯೊಬ್ಬರ ಮನೆಗೆ ಹೋಗಿ ಸೊಳ್ಳೆ ಇದೆಯೇ ಎಂದು ಕೇಳಿ, ಸೊಳ್ಳೆಗಳನ್ನು ಕೊಂದು ಬಿಡಿ ಎಂದು ಹೇಳುವುದು ಅಸಾಧ್ಯ ಮಾತು ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.