ನವದೆಹಲಿ (ಪಿಟಿಐ): ಯುಪಿಎ ಆಡಳಿತಾವಧಿಯಲ್ಲಿ ಸೋನಿಯಾ ಅವರು ‘ಸಂವಿಧಾನವನ್ನು ಮೀರಿ’ ಅಧಿಕಾರವನ್ನು ಚಲಾಯಿಸಿದ್ದರು. ಆದರೆ ತಮ್ಮ ಸರ್ಕಾರವು ಸಂವಿಧಾನದನ್ವಯ ನಡೆಯುತ್ತಿದೆ ಎಂದು ಸೋನಿಯಾ ಹಾಗೂ ರಾಹುಲ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಮೋದಿ ಅವರು, ಸಂಸತ್ತಿನಲ್ಲಿ ಎನ್ಡಿಎ ಸರ್ಕಾರವು ಮೊಂಡುತನ ಪ್ರದರ್ಶಿಸುತ್ತಿದೆ, ಸರ್ಕಾರವು ‘ಏಕವ್ಯಕ್ತಿ ಕೇಂದ್ರಿತ’ವಾಗಿದೆ ಎಂಬ ಕಾಂಗ್ರೆಸ್ ಆರೋಪವನ್ನು ನಿರಾಕರಿಸಿದ್ದಾರೆ.
‘ಪ್ರಾಯಶಃ ಅವರು ಈ ಹಿಂದೆ ಸಂವಿಧಾನ ಮೀರಿ ಪ್ರಯೋಗಿಸಲಾದ ಅಧಿಕಾರದ ಬಗ್ಗೆ ಹೇಳುತ್ತಿರಬಹುದು’ ಎಂದು ವ್ಯಂಗ್ಯವಾಡಿದ್ದಾರೆ.
ಅಲ್ಲದೇ, ‘ಇದೀಗ ಕೇವಲ ಸಂವಿಧಾನದತ್ತವಾಗಿರುವ ಅಧಿಕಾರವನ್ನು ಮಾತ್ರವೇ ಪ್ರಯೋಗಿಸಲಾಗುತ್ತಿದೆ. ನಾವು ಸಂವಿಧಾನದ ಮಾರ್ಗಗಳ ಮುಖಾಂತರ ಕೆಲಸ ಮಾಡುತ್ತಿದ್ದೇವೆ. ಸಂವಿಧಾನೇತರ ಇತರರ ಮಾತು ಕೇಳುತ್ತಿಲ್ಲ ಎಂಬುದು ಆರೋಪವಾದರೆ, ನಾನು ಆರೋಪವನ್ನು ಒಪ್ಪಿಕೊಳ್ಳುತ್ತೇನೆ’ ಎಂದು ಮೋದಿ ಅವರು ನುಡಿದಿದ್ದಾರೆ.
ರಾಹುಲ್ ಅವರ ‘ಸೂಟು–ಬೂಟಿನ ಸರ್ಕಾರ’ ಎಂಬ ಟೀಕೆಗೆ ಮೋದಿ, ಲೋಕಸಭೆ ಚುನಾವಣೆಯಲ್ಲಿ ಎದುರಾದ ಹೀನಾಯ ಸೋಲನ್ನು ಒಂದು ವರ್ಷದ ಬಳಿಕವೂ ಕಾಂಗ್ರೆಸ್ಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ’ ಎಂದು ತೀಕ್ಷ್ಣವಾಗಿ ಕಟುಕಿಯಾಡಿದ್ದಾರೆ.
‘ಮಾಡಿದ ತಪ್ಪುಒಪ್ಪುಗಳ ಪಾಪಕ್ಕಾಗಿ ಜನರು ಅವರನ್ನು ಶಿಕ್ಷಿಸಿದ್ದಾರೆ. ಅವರು ಅದರಿಂದ ಕಲಿಯಲಿದ್ದಾರೆ ಎಂದು ನಾವು ಅಂದುಕೊಂಡಿದ್ದೇವು' ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.