ADVERTISEMENT

ಸ್ಥಾನ ಹೊಂದಾಣಿಕೆ: ಇಂದು ಎನ್‌ಸಿಪಿ ಸಭೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2014, 19:30 IST
Last Updated 21 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆಗೆ ಸ್ಥಾನ ಹೊಂದಾಣಿಕೆ ವಿಚಾರವಾಗಿ ಅಂತಿಮ ನಿರ್ಧಾರಕ್ಕೆ ಬರುವುದಕ್ಕಾಗಿ ಎನ್‌ಸಿಪಿ ಪ್ರಮುಖರು ಸೋಮವಾರ ಸಭೆ ಸೇರಲಿದ್ದಾರೆ. ‘ಕಾಂಗ್ರೆಸ್‌ನಿಂದ ಹೊಸ ಪ್ರಸ್ತಾವ ಬಂದಿಲ್ಲ. ೧೪೪ ಸ್ಥಾನಗಳು ಬೇಕು ಎನ್ನುವ ಮೊದಲ ಬೇಡಿಕೆಗೆ ನಾವು ಬದ್ಧ. ಚುನಾವಣೆ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ’ ಎಂದು ಎನ್‌ಸಿಪಿ ಹಿರಿಯ ಮುಖಂಡ ಪ್ರಫುಲ್‌ ಪಟೇಲ್‌ ಹೇಳಿದ್ದಾರೆ.

ಬಿಕ್ಕಟ್ಟು ಶಮನಕ್ಕೆ ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌, ಪಿಸಿಸಿ ಅಧ್ಯಕ್ಷ ಮಾಣಿಕ್‌್ ರಾವ್‌ ಠಾಕ್ರೆ ಸೇರಿದಂತೆ ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕರು ಕೇಂದ್ರದ ಕೆಲವು ಮುಖಂಡರ ಜತೆ ಸಮಾಲೋಚನೆ ನಡೆಸುತ್ತಿರುವ ಬೆನ್ನಲ್ಲಿಯೇ ಪಟೇಲ್‌್ ಈ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಉಸ್ತುವಾರಿ ಹೊತ್ತಿರುವ  ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ರಾಜ್ಯದ ಕಾಂಗ್ರೆಸ್‌್ ಮುಖಂಡರು ಸಭೆ ನಡೆಸಿದರು.

ಸ್ಥಾನ ಹೊಂದಾಣಿಕೆ ವಿಷಯವಾಗಿ ಒಂದು ದಿನದಲ್ಲಿ ಉತ್ತರ ನೀಡುವಂತೆ ಪಟೇಲ್‌್ ಅವರು ಕಾಂಗ್ರೆಸ್‌ಗೆ ಶನಿವಾರ ಗಡುವು ನೀಡಿದ್ದರು. ಎನ್‌ಸಿಪಿ ಬೇಡಿಕೆಗೆ ಕಾಂಗ್ರೆಸ್‌ ಪ್ರತಿಕ್ರಿಯಿಸಿದ್ದು, ‘ಮಿತ್ರ ಪಕ್ಷಕ್ಕೆ ಕೆಲವು ಸ್ಥಾನಗಳನ್ನು ಬಿಟ್ಟುಕೊಡಲು ನಾವು ಸಿದ್ಧ. ಆದರೆ ಅದು ಇಂತಿಷ್ಟೇ ಸ್ಥಾನಗಳು ಬೇಕು ಎಂದು ಪಟ್ಟು ಹಿಡಿದರೆ ಏನೂ ಪ್ರಯೋಜನವಾಗುವುದಿಲ್ಲ’ ಎಂದು  ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ಮಾಣಿಕ್‌ ರಾವ್‌ ಠಾಕ್ರೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.