ADVERTISEMENT

ಹರಿಯಾಣ: ಖಟ್ಟರ್‌ ಪ್ರಮಾಣ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2014, 19:30 IST
Last Updated 26 ಅಕ್ಟೋಬರ್ 2014, 19:30 IST

ಪಂಚಕುಲಾ (ಪಿಟಿಐ): ಹರಿಯಾಣ­ದಲ್ಲಿ ಬಿಜೆಪಿಯ ಮೊದಲ  ಮುಖ್ಯ­ಮಂತ್ರಿ­­ಯಾಗಿ ಮನೋಹರ್‌ ಲಾಲ್‌ ಖಟ್ಟರ್‌ ಅವರು ಭಾನುವಾರ ಇಲ್ಲಿ ಪ್ರಮಾಣ­ವಚನ ಸ್ವೀಕರಿಸಿದರು. ಖಟ್ಟರ್‌ ಮತ್ತು ಅವರ ಹತ್ತು ಮಂದಿ ಸಚಿವರಿಗೆ ರಾಜ್ಯಪಾಲ ಕಪ್ತಾನ್‌ ಸಿಂಗ್‌ ಸೋಲಂಕಿ ಅವರು ಪ್ರಮಾಣವಚನ ಬೋಧಿಸಿದರು.

ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ಪಕ್ಷದ ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಕೇಂದ್ರದ ಅನೇಕ ಸಚಿವರು, ಬಿಜೆಪಿ ಅಧಿಕಾರದಲ್ಲಿರುವ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು, ಐಎನ್‌ಎಲ್‌ಡಿ ಪಕ್ಷದ ಅಭಯ್‌ ಚೌತಾಲಾ, ಪಂಜಾಬ್‌ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಮತ್ತು ಇನ್ನಿತರ ರಾಜಕೀಯ ಮುಖಂಡರು ಇದ್ದರು.

ಮೊದಲ ಬಾರಿಗೆ ಹರಿಯಾಣ ವಿಧಾನಸಭೆ ಪ್ರವೇಶಿಸಿರುವ ಖಟ್ಟರ್‌ ಅವರಿಗೆ ನಾಲ್ಕು ದಶಕಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಒಡನಾಟವಿದೆ. ನಿಷ್ಕಳಂಕ ಚಾರಿತ್ರ್ಯ, ಸಂಘಟನಾ ಸಾಮರ್ಥ್ಯಕ್ಕೆ ಹೆಸರಾದ­ವರು. 60 ವರ್ಷದ ಖಟ್ಟರ್‌ ಅವಿ­ವಾ­ಹಿತರು. ಜಾಟ್‌ ಸಮುದಾಯದ­ವರಲ್ಲದ ಹರಿಯಾಣದ ಐದನೇ ಮುಖ್ಯಮಂತ್ರಿ ಮತ್ತು ಪಂಜಾಬ್‌ ಮೂಲದ ಮೊದಲ ವ್ಯಕ್ತಿ.

ವಾದ್ರಾ ವಿರುದ್ಧ ತನಿಖೆ
ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಅವರ ಭೂ ವ್ಯವಹಾರಗಳು ಮತ್ತು ಇತರ ಭೂ ಅಕ್ರಮಗಳ ಬಗ್ಗೆ ತನಿಖೆ ನಡೆ­ಸಲಾಗುವುದು ಎಂದು  ಹರಿ­ಯಾ­ಣದ ನೂತನ ಸರ್ಕಾರ ಹೇಳಿದೆ.

‘ಖಂಡಿತವಾಗಿಯೂ ಈ ಪ್ರಕರಣಗಳ ತನಿಖೆ ನಡೆಸುತ್ತೇವೆ. ಹೈಕೋರ್ಟ್‌ನ ಹಾಲಿ ನ್ಯಾಯ­ಮೂರ್ತಿಯೊಬ್ಬರು ತನಿಖೆ ನಡೆಸ­ಲಿ­ದ್ದಾರೆ’ ಎಂದು ಹಿರಿಯ ಸಚಿವ ರಾಮ್‌ ಬಿಲಾಸ್‌ ಶರ್ಮಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.