ಇಂದೋರ್: ಇಲ್ಲಿನ ರಾಜ್ವಾಡಾ ಕೋಟೆಯ ಹೊರವಲಯದಲ್ಲಿ ಹೆತ್ತವರೊಂದಿಗೆ ನಿದ್ರಿಸುತ್ತಿದ್ದ 8 ತಿಂಗಳ ಮಗುವನ್ನು ಅಪಹರಿಸಿದ ವ್ಯಕ್ತಿಯೊಬ್ಬ ಅತ್ಯಾಚಾರಗೈದು ಕೊಲೆ ಮಾಡಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಬಲೂನ್ ವ್ಯಾಪಾರಿ ದಂಪತಿಗಳ 8 ತಿಂಗಳ ಮಗುವನ್ನು ಅವರ ಕುಟುಂಬದ ಪರಿಚಿತ ವ್ಯಕ್ತಿಯೇ ಹೊತ್ತೊಯ್ದು ಈ ಹೀನ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
21 ರ ಹರೆಯದ ದುಷ್ಕರ್ಮಿ ಮಗುವನ್ನು ಹೆಗಲ ಮೇಲೆ ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಿದ್ರಿಸುತ್ತಿದ್ದ ಮಗುವನ್ನು ಶುಕ್ರವಾರ ಮುಂಜಾನೆ 200 ಕಿಮೀ ದೂರ ಹೊತ್ತುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಅಂಗಡಿಯ ಮಾಲೀಕ ಕೆಳಮಹಡಿಗೆ ಹೋದಾಗ ಮಗುವಿನ ಶವ ಪತ್ತೆಯಾಗಿತ್ತು. ವಾಣಿಜ್ಯ ಸಂಕೀರ್ಣವೊಂದಕ ಕಟ್ಟಡದ ಕೆಳಮಹಡಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ.
ಶುಕ್ರವಾರ ಮುಂಜಾನೆ ನವೀನ್ ಗಾಡ್ಕೆ ಎಂಬ ವ್ಯಕ್ತಿ ಮಗುವನ್ನು ಅಪಹರಿಸಿ ಅತ್ಯಾಚಾರಗೈದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮಗುವಿನ ಶವ ಪತ್ತೆಯಾದ ನಂತರ ಆ ಪ್ರದೇಶದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯ ಗುರುತು ಪತ್ತೆಯಾಗಿತ್ತು.
ಮಗುವಿನ ದೂರ ಸಂಬಂಧಿಯಾದ ನವೀನ್, ಮುಂಜಾನೆ 4.45ರ ಹೊತ್ತಲ್ಲಿ ಸೈಕಲ್ನಲ್ಲಿ ಬಂದು ಹೆತ್ತವರ ಜತೆ ಮಲಗಿದ್ದ ಹೆಣ್ಣುಮಗುವನ್ನು ಅಪಹರಿಸಿದ್ದಾನೆ. ಆನಂತರ ಇನ್ನೊಂದು ರಸ್ತೆಯಲ್ಲಿರುವ ಶಿವ ವಿಲಾಸ್ ಪ್ಯಾಲೇಸ್ನತ್ತ ಹೋಗಿದ್ದಾನೆ. ಅಲ್ಲಿರುವ ಕಟ್ಟಡವೊಂದರ ಕೆಳಮಹಡಿಯಲ್ಲಿ ಮಗುವನ್ನು ಅತ್ಯಾಚಾರವೆಸಗಿದ್ದಾನೆ. ಮಗುವಿನ ಶವ ಮಧ್ಯಾಹ್ನ ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಮಗುವಿನ ರಕ್ತದ ಕಲೆಯಿರುವ ಬಟ್ಟೆ ಮತ್ತು ಸೈಕಲ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಗುವಿನ ಗುಪ್ತಾಂಗ ಮತ್ತು ತಲೆಯಲ್ಲಿ ಗಾಯದ ಕಲೆಗಳಿವೆ. ಮಗುವಿನ ತಲೆಯಲ್ಲಿರುವ ಗಾಯ ನೋಡಿದರೆ, ಆತ ಮಗುವನ್ನು ಕೆಳಗೆಸೆದಿರಬಹುದು ಎಂಬ ಶಂಕೆ ಇದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಪ್ರಕರಣವನ್ನು ಖಂಡಿಸಿದ ಮುಖ್ಯಮಂತ್ರಿ ಶಿವರಾಜ್ ಚೌಹಾಣ್, ನಮ್ಮ ಸಮಾಜ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಆರೋಪಿಯನ್ನು ಬಂಧಿಸಲಾಗಿದ್ದು ಆತನಿಗೆ ಶೀಘ್ರವೇ ಶಿಕ್ಷೆ ವಿಧಿಸಲಾಗುವುದು ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.